ಬೆಳ್ತಂಗಡಿ: ಚಿತ್ರದುರ್ಗದ ಕಲ್ಲಿನ ಕೋಟೆ, ಜೋಗ್ ಫಾಲ್ಸ್ ಪ್ರದೇಶ ಸೇರಿದಂತೆ ಅಪಾಯಕಾರಿ ಪ್ರದೇಶಗಳನ್ನು ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಬರಿಗೈಯಿಂದಲೇ ಏರುವ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಭಾನುವಾರ 1,700 ಅಡಿ ಎತ್ತರದ ಗಡಾಯಿ ಕಲ್ಲನ್ನು ಏರಲಿದ್ದಾರೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿರುವ ಗಡಾಯಿಕಲ್ಲು,ನರಸಿಂಹ ಘಡ,ಜಮಲಾಬಾದ್ ಎಂದು ಕೂಡ ಹೆಸರುವಾಸಿಯಾಗಿದೆ. ಹಲವಾರು ಪರ್ವತಗಳನ್ನು ಬೆಟ್ಟ ಕಟ್ಟಡಗಳನ್ನು ಏರಿರುವ ಜ್ಯೋತಿರಾಜ್,ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತಮ್ಮ ಸಾಹಸ ತೋರಲು ಮುಂದಾಗಿದ್ದಾರೆ. ಇದಕ್ಕಾಗಿ ಇವರ ಜತೆ ಎಂಟು ಮಂದಿಯ ತಂಡ ಆಗಮಿಸಿದ್ದು ಪೂರ್ವ ತಯಾರಿ ಕೈಗೊಂಡಿದೆ. ತಂಡದ ಸದಸ್ಯರಾದ ಬಸವರಾಜ್, ರಾಜಶೇಖರ,ಪವನ್ ಜೋಸ್, ನಿಂಗರಾಜು ಮದನ್,ನವೀನ್,ಅಭಿ, ಪವನ್ ಕುಮಾರ್ ಆಗಮಿಸಿದ್ದು ಧರ್ಮಸ್ಥಳದಲ್ಲಿ ವಾಸ್ತವ್ಯ ಹೂಡಿದ್ದಾರೆ.ತಂಡ ಶಾಸಕ ಹರೀಶ್ ಪೂಂಜರವರನ್ನು ಭೇಟಿ ಮಾಡಿದೆ.ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವತಿಯಿಂದ ಗಡಾಯಿ ಕಲ್ಲು ಏರಲು ಅನುಮತಿಯನ್ನು ಪಡೆದಿದೆ.
ಪೂರ್ವ ತಯಾರಿ:
ಫೆ.12ರಂದು ಭಾನುವಾರ ಬೆಳಿಗ್ಗೆ 8:30ರ ಬಳಿಕ ಗಡಾಯಿ ಕಲ್ಲನ್ನು ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಡೆಯಿಂದ ಏರಲಿರುವ ಜ್ಯೋತಿರಾಜ್ ಸಾಹಸಕ್ಕೆ ತಂಡ ಮಾರ್ಕಿಂಗ್,ಪರಿಸರ ವೀಕ್ಷಣೆ ಮೊದಲಾದ ಪೂರ್ವ ತಯಾರಿಗಳನ್ನು ಶುಕ್ರವಾರ ನಡೆಸಿದೆ. ಕಾನೂನಿನ ಚೌಕಟ್ಟಿನೊಳಗೆ ಉತ್ತರಾಭಿಮುಖವಾಗಿ ಕೈಗಳ ಸಹಾಯದಿಂದ ಗಡಾಯಿಕಲ್ಲು ಏರಲಿರುವ ಜ್ಯೋತಿರಾಜ್ ಸುರಕ್ಷತೆಯ ದೃಷ್ಟಿಯಿಂದ ಸೊಂಟಕ್ಕೆ ರೋಪ್ ಅಳವಡಿಸಿಕೊಂಡು ಸಾಹಸ ನಡೆಸಲಿದ್ದಾರೆ.
ಬೆಟ್ಟ, ಗುಡ್ಡ, ಕಟ್ಟಡ, ಪರ್ವತ ಏರುವ ಜತೆ ಅಪಾಯಕಾರಿ ಸ್ಥಳಗಳಲ್ಲಿರುವ ಶವಗಳನ್ನು ಮೇಲೆತ್ತುವ ಹಾಗೂ ಇನ್ನಿತರ ಸಾಹಸ ಕಾರ್ಯ ಮಾಡುವ ಜ್ಯೋತಿ ರಾಜ್ ಗೆ ವಿದ್ಯಾಭ್ಯಾಸದಿಂದ ವಂಚಿತರಾಗುವ ಮಕ್ಕಳಿಗೆ ಸಹಕಾರ ನೀಡುವ ಸಲುವಾಗಿ ಫೌಂಡೇಶನ್ ಒಂದನ್ನು ಸ್ಥಾಪಿಸುವ ಉದ್ದೇಶವಿದೆ. ತನ್ನ ಸಾಹಸಮಯ ಕೆಲಸಗಳಿಂದ ಬರುವ ಆದಾಯವನ್ನು ಫೌಂಡೇಶನ್ ಸ್ಥಾಪನೆಗೆ ಮೀಸಲಿರಿಸುವುದಾಗಿ ತಿಳಿಸಿದ್ದಾರೆ. ಸುಸಜ್ಜಿತ ಜಿಮ್ ಒಂದನ್ನು ಸ್ಥಾಪಿಸುವ ಕುರಿತು ತಿಳಿಸಿದ್ದಾರೆ.
ಜೋಗ್ ಜಲಪಾತ ಪರಿಸರದಲ್ಲಿ ಜಾರಿ ಬಿದ್ದು ಗಾಯಗೊಂಡು ಚಿಕಿತ್ಸೆಗೆ ಒಳಗಾದ ಕಾರಣದಿಂದ ಕೂಡಿಟ್ಟ ದುಡ್ಡೆಲ್ಲ ವ್ಯಯವಾಗಿದೆ. ಒಟ್ಟು 13 ಜನ ಶಿಷ್ಯರನ್ನು ಹೊಂದಿದ್ದು ಅವರು ಹಲವು ಸಾಹಸಗಳಲ್ಲಿ ದೇಶ,ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ದಕ ಜಿಲ್ಲೆಯ ಜನರು ಹೃದಯವಂತರಾಗಿದ್ದು, ಸಹಕಾರದ ಧ್ಯೇಯ ಹೊಂದಿದ್ದಾರೆ. ಜಿಲ್ಲೆಯ ಇತರ ಕಡೆ ಇರುವ ಪರ್ವತ, ಎತ್ತರದ ಕಟ್ಟಡಗಳನ್ನು ಏರಲು ಅನುಮತಿ ನೀಡಿದರೆ ತಮ್ಮ ಸಾಹಸವನ್ನು ಅಲ್ಲಿಯೂ ತೋರುವುದಾಗಿ ತಿಳಿಸಿದ್ದಾರೆ.