ಸುಳ್ಯ: ಕಾಡುಪ್ರಾಣಿಗಳ ಉಪಟಳದಿಂದ ಕೃಷಿ ಕೆಲಸದಲ್ಲಿ ತೊಡಗುವ ರೈತರು ಕಂಗಾಲಾಗಿರುವ ಈ ಸಂದರ್ಭ ಚುನಾವಣೆಯ ನೆಪವೊಡ್ಡಿ ಬಂದೂಕು ಠೇವಣಿ ಇಡುವಂತೆ ಒತ್ತಾಯಿಸುತ್ತಿರುವುದು ರೈತರಿಗೆ ಮಾರಕವಾಗಿದ್ದು, ಆದೇಶದ ಬಗ್ಗೆ ಅಧಿಕಾರಿಗಳು ಮರುಪರಿಶೀಲನೆ ಮಾಡಬೇಕು, ಈ ನಿಟ್ಟಿನಲ್ಲಿ ರೈತ ಸಂಘದ ಹಿತ ಕಾಯ್ದುಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳು ವಿಫಲವಾಗಿದೆ, ರೈತರಿಗೆ ನ್ಯಾಯ ಸಿಗದಿದ್ದಲ್ಲಿ ಮತದಾನದಿಂದ ದೂರ ಉಳಿಯುವುದಾಗಿ ರೈತ ಸಂಘ ಎಚ್ಚರಿಸಿದೆ.
ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಲೋಲಜಾಕ್ಷ ಬೂತಕಲ್ಲು ಚುನಾವಣಾ ದಿನಾಂಕ ಪ್ರಕಟಗೊಂಡ ಕೂಡಲೇ ಬೆಳೆ ರಕ್ಷಣೆಗಾಗಿ ರೈತರಿ ಗಿದ್ದ ಬಂದೂಕನ್ನು ಸಮೀಪದ ಪೊಲೀಸು ಠಾಣೆಯಲ್ಲಿ ಠೇವಣಾತಿ ಮಾಡಬೇಕೆಂಬ ಆದೇಶ ಜಾರಿಯಾಗಿದೆ. ಇದರಿಂದ ಕಾಡು ಪ್ರಾಣಿ ಹಾವಳಿ ಹೆಚ್ಚಿದ್ದು ಬೆಳೆನಷ್ಟವಾಗುತ್ತಿದೆ.
ಈ ಬಗ್ಗೆ ರೈತರು ಸಲ್ಲಿಸಿದ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿದ್ದು, ಪೂರಕ ದಾಖಲೆಗಳೊಂದಿಗೆ ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿದರೆ ವಿನಾಯತಿಯ ಬಗ್ಗೆ ಪರಿಶೀಲಿಸಬಹುದೆಂದು ಹೇಳಿದ್ದರು. ಈ ನಿಟ್ಟಿನಲ್ಲಿ ರೈತರುಮನವಿ ಪತ್ರವನ್ನು ತೆಗೆದುಕೊಂಡು ಹೋದಾಗ ಆಶ್ಚರ್ಯ ಒಂದು ಕಾದಿತ್ತು. ಎಲ್ಲಾ ವಿಧದಿಂದ ತನಿಖೆಗೊಂಡು ಬೆಳೆ ರಕ್ಷಣೆಗೆ ಬಂದೂಕು ಅಗತ್ಯವೆಂಬ ಕಾರಣದಿಂದ ಪರವಾನಿಗೆ ದೊರೆತಿದ್ದರೂ, ಮತ್ತೆ ಪುನಃ ಗ್ರಾಮಲೆಕ್ಕಿಗರ ಮುಂದೆ ಹೇಳಿಕೆ, ಮುಚ್ಚಳಿಕೆ, ಐದು ಜನ ಗ್ರಾಮಸ್ಥರಿಂದ ಸಹಿ ಸಂಗ್ರಹ ಮುಂತಾದ ಬೇಡಿಕೆಗಳನ್ನೆಲ್ಲಾ ಪೂರೈಸಿ, ಮನವಿ ಸಲ್ಲಿಸುತ್ತಿದ್ದಂತೆ 24-4-23ಕ್ಕೆ ಇಟ್ಟಿದ್ದ ಕೊನೆಯ ದಿನಾಂಕವನ್ನು 13-4-23ಕ್ಕೆ ಹಿಂದಕ್ಕೆ ನಿಗದಿಪಡಿಸಿದ್ದರು.
ತಕ್ಷಣ ಎಚ್ಚೆತ್ತುಕೊಂಡ ಆರಕ್ಷಕ ಇಲಾಖೆ 13ನೇ ತಾರೀಖಿನ ಒಳಗೆ ಬಂದೂಕನ್ನು ಠೇವಣಾತಿ ಮಾಡದೇ ಇದ್ದಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ಇರಿಸಿಕೊಂಡಿದ್ದೀರಿ ಎಂಬ ಬೆದರಿಕೆಯ ಮೂಲಕ ಠೇವಣಾತಿಯನ್ನ ನಿಶ್ಚಿತ ದಿನಾಂಕದೊಳಗೆ ಮಾಡಿಸಿಕೊಂಡರು. ಬೆಳೆ ಹೋದರೂ ಸಹಿಸಿಕೊಳ್ಳಬಲ್ಲೆ ಮಾನ ಹೋಗುವುದು ಸಹಿಸಿಕೊಳ್ಳಲಾರೆ ಎಂಬುದು ರೈತರೆಲ್ಲರ
ಮನೋಧರ್ಮವಾದುದರಿಂದ ಕಾನೂನನ್ನು ಪಾಲಿಸಿದರು. ಹೀಗಾಗಿ ಬೆಳೆನಷ್ಟವಾಗಿದ್ದು ಮುಂದಾದರೂ ಠೇವಣಿ ವಿನಾಯಿತಿಗೆ ಅರ್ಜಿ ಸಲ್ಲಸಿದವರಿಗೆ ವಿನಾಯಿತಿ ತಡೆ ಹಿಡಿದಿದ್ದನ್ನು ಮರು ಪರಿಶೀಲಿಸಿ ವಿನಾಯಿತಿ ನೀಡಬೇಕೇಂದು ರೈತಸಂಘ ಒತ್ತಾಯಿಸಿದೆ
ಜಿಲ್ಲಾಧಿಕಾರಿಗಳು, ಪೋಲಿಸ್ ಅಧಿಕಾರಿಗಳು, ಹಾಗೂ ಜನಪ್ರತಿನಿಧಿಗಳು ಕೂಡಲೇ ಚುನಾವಣೆಯ ಸಮಯದಲ್ಲಿ ಕೋವಿ ಪರವಾನಿಗೆ ಹೊಂದಿದ ಎಲ್ಲಾ ರೈತರಿಗೆ ಠೇವಣೆ ಇಡುವುದನ್ನು ಸಂಪೂರ್ಣ ವಿನಾಯಿತಿ ನೀಡಬೇಕು.ನೀಡದಿದ್ದಲ್ಲಿ ರೈತರು ಮತದಾನದಲ್ಲಿ ಭಾಗವಹಿಸದೇ ಕಾನೂನು ಹೋರಾಟಕ್ಕೆ ಮುಂದಾಗಲಿದ್ದೇವೆ. ಎಂದು ರೈತಸಂಘ ಸುಳ್ಯ ತಾಲೋಕು ಘಟಕ ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ ಮಜಿಗುಂಡಿ, ದೇವಪ್ಪ ಕುಂದಲ್ಪಾಡಿ, ಸುಳ್ಯಕೋಡಿ ಮಾದವ ಗೌಡ,ತೀರ್ಥರಾಮ ಉಳುವಾರು,ಭರತ್ ಕುಮಾರ್ ಐವರ್ನಾಡು. ಮೊದಲಾದವರಿದ್ದರು.