ಕಾರ್ಕಳ: ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಯೋರ್ವರು ಚುನಾವಣಾ ಆಕಾಂಕ್ಷಿಯಾಗಿದ್ದಾರೆ.ಅನಾದಿ ಕಾಲದಿಂದಲೂ ಸತ್ಯ ನಿಷ್ಠೆ ಕೌಶಲ್ಯ ಹಾಗೂ ಗುಡಿ ಕೈಗಾರಿಕೆಗೆ ಪ್ರಸಿದ್ದವಾಗಿರುವ ಕಾರ್ಕಳ ಕ್ಷೇತ್ರವನ್ನು ಮುಂದಿನ ದಿನಗಳಿಗೆ ಆಧುನಿಕತೆಗೆ ಪೂರಕವಾಗುವಂತೆ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಅಭಿವೃದ್ದಿಪಡಿಸಿ ಮಾದರಿ ಕ್ಷೇತ್ರವನ್ನಾಗಿಸುವುದೇ ನನ್ನ ಕನಸಾಗಿದೆ ಎಂದು ಸಾವಿತ್ರಿ ಸತ್ಯವಾನ್ ಟ್ರಸ್ಟ್ ನ ಸಂಸ್ಥಾಪಕಿ ಡಾ.ಮಮತಾ ಹೆಗ್ಡೆ ಅವರು ಹೇಳಿದ್ದಾರೆ.
“ವೇದಗಳಲ್ಲಿ ಹೇಳಿದಂತೆ ವಸುದೈವ ಕುಟುಂಬಕಂ ಹಾಗೂ ರಾಷ್ಟ್ರಕವಿ ಕುವೆಂಪು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟ ಎಂಬಂತೆ ಎಲ್ಲರೂ ಒಂದಾಗಿ ಜಾತಿ ಬೇಧ ಮರೆತು ನಾವೆಲ್ಲರೂ ಕಾರ್ಕಳದಲ್ಲಿ ಒಂದಾಗಿ ಬಾಳುವ ವಾತಾವರಣ ನಿರ್ಮಾಣ ಮಾಡುವುದು ನನ್ನ ಕನಸಾಗಿದೆ”
“ಭ್ರಷ್ಟಾಚಾರ ರಹಿತ ಕಾರ್ಕಳ,ಕೈಗಾರಿಕೆ ಶಿಕ್ಷಣ, ಉದ್ಯೋಗ, ಮಹಿಳಾ ಸ್ವಾವಲಂಭೀಕರಣ,ತೋಟಗಾರಿಕೆ, ಕೃಷಿ, ಸಂರಕ್ಷಣೆ, ರಫ್ತು ಮಾರಾಟ, ನೀರಾವರಿ ವ್ಯವಸ್ಥೆ, ರಸ್ತೆ, ಶುಚಿತ್ವ ಮುಂತಾದ ಮೂಲಭೂತ ಅದ್ಯತೆ ಗಳನ್ನು ಅಭಿವೃದ್ಧಿಪಡಿಸುವುದೇ ನನ್ನ ಮೂಲ ಉದ್ದೇಶವಾಗಿದೆ.”
“ರಾಣಿ ಅಬ್ಬಕ್ಕದೇವಿ ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರ ಮಹಿಳೆ.ಅಂತಹ ಮಹಿಳೆ ಆಳಿದ ನಮ್ಮ ತುಳುನಾಡಿನಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಬೆಳೆಯಬೇಕಿದೆ.ಕಾರ್ಕಳದಲ್ಲಿ 97,047 ಮಹಿಳಾ ಮತದಾರರಿದ್ದಾರೆ.ಅಂದರೆ ಪುರುಷರಿಗಿಂತ ಹೆಚ್ಚು.ಹೀಗಿರುವಾಗ ಮಹಿಳಾ ಸ್ವಾವಲಂಬನೆಗೆ ಕಾರ್ಕಳದಲ್ಲಿ ಇದುವರೆಗೆ ಆಡಳಿತ ನಡೆಸಿದವರ ಕೊಡುಗೆ ಶೂನ್ಯ. ಕಾರ್ಕಳಕ್ಕೆ ವಿದ್ಯಾವಂತ ಮಹಿಳೆ ರಾಜಕಾರಣದಲ್ಲಿ ಅವಶ್ಯಕತೆ ಇದೆ ಎಂಬುದು ಜನತೆಗೆ ಅರಿವಾಗಿದೆ.”
“ಆದುದರಿಂದ ಕಾರ್ಕಳದ ಪುರುಷ ಹಾಗೂ ಮಹಿಳಾ ಮತದಾರರು ನನ್ನನ್ನು ಖಂಡಿತ ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. ಕಾರ್ಕಳದ ವಿದ್ಯಾನಂಥ ಮತದಾರರು ಸಹೋದರ ಸಹೋದರಿಯರು ದಿಟ್ಟ ನಿಲುವನ್ನು ತೆಗೆದುಕೊಂಡು ಕ್ರಾಂತಿಯ ಹೆಜ್ಜೆಯನ್ನಿಟ್ಟು ಬದಲಾವಣೆ ತಂದೆ ತರುತ್ತಾರೆ.
ನಾನು ಕಾರ್ಕಳದಲ್ಲಿಯೇ ಹುಟ್ಟಿದವಳು ಕಾರ್ಕಳದಲ್ಲಿಯೇ ಬೆಳೆದವಳು. ಬೆಸ್ಟ್ ಸಿಟಿಜನ್ ಅವಾರ್ಡ್,ಸಾಧಕ ಬಂಟ ಮಹಿಳಾ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪಡೆದುಕೊಂಡಿದ್ದೇನೆ. ನಮ್ಮ ದೇಶದ ಗಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸೈನಿಕರಿಗೆ ಬೆಚ್ಚನೆ ಉಡುಪಿನ ಕುರಿತಾಗಿ ಸಂಶೋಧನೆ ಮಾಡಲು ಜಮ್ಮು ಕಾಶ್ಮೀರದ ಲೇಹ್, ಲಡಾಕ ಮತ್ತು ಸಿಯಾಚಿನ್ ಬೇಸ್ ಕ್ಯಾಂಪನಲ್ಲಿರುವ ಸೈನಿಕರ ಜೊತೆಯಲ್ಲಿದ್ದು, ಅವರು ಕೆಲಸ ಮಾಡುವ ವಾತಾವರಣದ ಬಗ್ಗೆ ಸ್ವಯಂ ಅದ್ಯಯನ ನಡೆಸಿ ವರದಿಯನ್ನು ಕೊಟ್ಟಿದ್ದೇನೆ.
ರಷ್ಯಾ ದೇಶದ ತೀನ್ಬರ್ಗ ವಿಶ್ವವಿದ್ಯಾನಿಲಯಕ್ಕೆ ಸಬ್ಜೆಕ್ಟ್ ಎಕ್ಸ್ಪರ್ಟ್ ಯಾಕತ್ರಿನ್ ಬರ್ಗ್ ಕೂಡಾ ಸೇವೆ ಸಲ್ಲಿಸಿರುತ್ತೇನೆ. ವಿದೇಶದಲ್ಲಿ ಕೆಲಸ ಮಾಡಿದ್ದೇನೆ. ದುಡ್ಡೇ ಮಾಡಬೇಕು ಎಂದು ನಾನು ರಾಜಕೀಯಕ್ಕೆ ಬಂದಿಲ್ಲ. ನಾನು ದುಡ್ಡು ಖರ್ಚು ಮಾಡಿ ದುಡ್ಡು ತೆಗೆಯಲು ಬಂದಿಲ್ಲ. ಬಡ ಕಾರ್ಯಕರ್ತರು ದುಡಿದ ಹಣದಲ್ಲಿ ಶೋಕಿ ಮಾಡಲು ಬಂದಿಲ್ಲ. ಯಾರಿಂದಲೂ ಹಣ ಪಡೆದು ಕಮಿಷನ್ ಮಾಡಲು ಬಂದಿಲ್ಲ. ನನ್ನ ಉದ್ದೇಶ ಕಾರ್ಕಳದಲ್ಲಿ ಬದಲಾವಣೆ ತರಬೇಕು. ಭ್ರಷ್ಟಾಚಾರ ಮುಕ್ತ ಆಗಬೇಕು.ಜನಸಾಮಾನ್ಯರು ನಿರಾಳವಾಗಿ ಬದುಕುವಂತಾಗಬೇಕು ಎಂದು ಅವರು ಹೇಳಿದ್ದಾರೆ.
“ನಮ್ಮ ಕಾರ್ಕಳ ವಿಧಾನ ಸಭಾ ಕ್ಷೇತ್ರವು ಮಹಿಳಾ ಮತದಾರರೇ ಜಾಸ್ತಿ ಇರುವ ಕ್ಷೇತ್ರವಾಗಿದ್ದು, ಸ್ವಾತಂತ್ರ್ಯದ ನಂತರ ಈ ವರೆಗೆ ಯಾವುದೇ ರಾಜಕೀಯ ಪಕ್ಷಗಳು ಮಹಿಳೆಯನ್ನು ಅಭ್ಯರ್ಥಿಯಾಗಿ ನಿಲ್ಲಿಸಲಿಲ್ಲ. ಈ ಕಾರಣಕ್ಕಾಗಿ ನಾನು ನನ್ನ ಹುಟ್ಟಿದ ಊರಿನ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿರುತ್ತೇನೆ. ಈ ಒಂದು ಸದುದ್ದೇಶದ ಚಿಂತನೆಯನ್ನು ಮಾನ್ಯ ಮತದಾರರು ವಿಜಯದ ಅವಕಾಶವನ್ನಾಗಿ ಪರಿವರ್ತಿಸಿದರೆ, ಕಾರ್ಕಳ ಕ್ಷೇತ್ರದ ಜನರ ಸರ್ವಾಂಗಿಣ ಪ್ರಗತಿಗಾಗಿ, ತನು-ಮನಗಳಿಂದ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ, ಕಪ್ಪು ಚುಕ್ಕೆಗೆ ಅವಕಾಶ ನೀಡದೆ, ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡುತ್ತೇನೆ.”
“ವಿದ್ಯಾವಂತ ಯುವಕ-ಯುವತಿಯರಿಗೆ ಸರ್ಕಾರಿ ನೌಕರಿಗಾಗಿ ಸ್ವರ್ದಾತ್ಮಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಲು ಪರೀಕ್ಷಾ ಪೂರ್ವ ತರಬೇತಿಯ ವ್ಯವಸ್ಥೆಯನ್ನು ನಮ್ಮ ಕ್ಷೇತ್ರದಲ್ಲಿ ಸರ್ಕಾರಿ, ಖಾಸಗಿ ಸಹಭಾಗಿತ್ವದೊಂದಿಗೆ ತೆರೆಯಲು ಶ್ರಮಿಸುತ್ತೇನೆ. ಈ ಮೂಲಕ ಕ್ಷೇತ್ರದ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆಗಳಲಿ, ಬ್ಯಾಂಕ, ರೈಲ್ವೆ ಹಾಗೂ ಇನ್ನಿತರ ಇಲಾಖೆಗಳಲ್ಲಿ ಕೆಲಸ ದೊರಕಿಸಿಕೊಳ್ಳಲು ಸಹಾಯವಾಗುತ್ತದೆ.”
ಉಡುಪಿ ಜಿಲ್ಲೆಯಲ್ಲಿ ಈವರೆಗೆ ನಮ್ಮ ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ ಸ್ಥಾಪನೆ ಆಗಲಿಲ್ಲ. ಇದನ್ನು ಕಾರ್ಕಳ ಕ್ಷೇತ್ರದಲ್ಲಿ ಸ್ಥಾಪಿಸಲು ಪ್ರಯತ್ನಿಸುತ್ತೇನೆ. ಕ್ಷೇತ್ರದಲ್ಲಿರುವ ಕುಶಲ ಕರ್ಮಿಗಳು ತಯಾರಿಸುವ ಬುಟ್ಟಿ ಇತ್ಯಾದಿ ಕರಕುಶಲ ವಸ್ತುಗಳಿಗೆ ಉತ್ತಮ ಬೆಲೆ/ದರ ಮತ್ತು ಮಾರುಕಟ್ಟೆಯನ್ನು ಒದಗಿಸಲು ಪ್ರಯತ್ಯಿಸುತ್ತೇನೆ.”
“ನನ್ನ ವಿದ್ಯಾಭ್ಯಾಸ ಎಲ್ಲಾ ಹಂತಗಳಲ್ಲಿಯೂ ಅತ್ಯುನ್ಯತ ಶ್ರೇಣಿಯಲ್ಲಿಯೇ ಉತೀರ್ಣಳಾಗಿದ್ದು, ಶಿಕ್ಷಕಿಯಾಗಿ ನನ್ನ ವೃತ್ತಿ ಜಿವನದಲ್ಲಿಯೂ ಎಲ್ಲಾ ವಿದ್ಯಾರ್ಥಿಗಳ ಸರ್ವತೋಮುಖ ವಿದ್ಯಾ ಪ್ರಗತಿಗಾಗಿ ಶ್ರಮಿಸಿರುತ್ತೇನೆ. ಹಲವಾರು ವಿದ್ಯಾರ್ಥಿಗಳಿಗೆ ಶಿಸ್ತಿನಿಂದ ಮಾರ್ಗದರ್ಶನ ಮಾಡುತ್ತಿದ್ದೇನೆ. ಮುಂದೆ ನಿಮ್ಮೇಲ್ಲರ ಆಶಿರ್ವಾದದಿಂದ ಕ್ಷೇತ್ರದ ಶಾಶಕಿಯಾಗುವ ಅವಕಾಶ ದೊರೆತರೆ, ನಿಯಮಬದ್ಧವಾಗಿ ಕ್ಷೇತ್ರದ ಜನರ ಕುಂದುಕೊರತೆಗಳನ್ನು ನಿವಾರಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.
ಸುನೀಲ್ ಕುಮಾರ್ ಬಗ್ಗೆ: ಸುನೀಲ್ ಕುಮಾರ್ ರವರಿಗೆ ಈಗಾಗಲೇ ಪಕ್ಷ ಐದು ಬಾರಿ ಚುನಾವಣೆಗೆ ಅವಕಾಶ ಮಾಡಿ ಕೊಟ್ಟಿದೆ. ಕಾರ್ಕಳಕ್ಕೆ ಈಗಾಗಲೇ ಅವರ ಕೆಲಸ ಏನು ಎಂದು ತೋರಿಸಿಕೊಟ್ಟಿದ್ದಾರೆ.ಬಿಜೆಪಿ ಪಕ್ಷ ವ್ಯಕ್ತಿಕೇಂದ್ರಿತ ಪಕ್ಷವಲ್ಲ.ವಿಚಾರ ಕೇಂದ್ರಿತ ಪಕ್ಷ.ಆದುದರಿಂದ ಒಬ್ಬ ವ್ಯಕ್ತಿಯನ್ನೇ ಮತ್ತೆ ಮತ್ತೆ ಬಿಜೆಪಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂಬ ನಂಬಿಕೆ ಇದೆ.
ಇವತ್ತು ಕಾರ್ಕಳದ ಬಿಜೆಪಿಯಲ್ಲಿದ್ದವರೇ ಪ್ರಮೋದ್ ಮುತಾಲಿಕ್ ಅವರನ್ನು ಕರೆದುಕೊಂಡು ಬಂದಿದ್ದಾರೆ. ಬಿಜೆಪಿಯನ್ನು ಬೆಳೆಸಿದವರೂ ಅವರೇ. ಕಾರ್ಕಳದಲ್ಲಿ ಕಾಂಗ್ರೆಸ್ ಗಿಂತ ಹೆಚ್ಚು ಪ್ರಮೋದ್ ಮುತಾಲಿಕ್ ಅವರ ಕೆಲಸ ಕಾರ್ಯಗಳು ನಡೆಯುತ್ತಿದೆ. ಹೀಗಿದ್ದಾಗ ನೀವೇ ಯೋಚನೆ ಮಾಡಿ ಸುನೀಲ್ ಕುಮಾರ್ ವಿರೋಧ ಅಲೆ ಪಕ್ಷದಲ್ಲಿಯೇ ಎಷ್ಟಿದೆ ಎಂದು. ಒಂದು ವೇಳೆ ನನಗೆ ಟಿಕೆಟ್ ನೀಡಿದರೆ ಇವತ್ತು ಕಾರ್ಕಳದಲ್ಲಿ ಸುನೀಲ್ ಕುಮಾರ್ ಅವರಿಂದಾಗಿ ಬಿಜೆಪಿ ಬಿಟ್ಟುಹೋದ ಕಾರ್ಕಳದ ಬಿಜೆಪಿ ಕಾರ್ಯಕರ್ತರನ್ನು ಪ್ರಮುಖರನ್ನು ಮತ್ತೆ ಬಿಜೆಪಿಗೆ ಕರೆತರುವ ಜವಾಬ್ದಾರಿ ನನ್ನದು.
ಮುತಾಲಿಕ್ ವಿರುದ್ಧ ಮಹಿಳೆ ಸ್ಪರ್ಧಿಸಲು ಸಾಧ್ಯವಿದೆಯೇ?
ಪ್ರಮೋದ್ ಮುತಾಲಿಕ್ ಹಿರಿಯರು. ಅವರ ಬಗ್ಗೆ ಗೌರವ ಇದೆ. ಕಾರ್ಕಳದಲ್ಲಿ ಚುನಾವಣೆ ಗೆಲ್ಲಲು ಅವರ ಆಶೀರ್ವಾದ ಬೇಕು. ಮುತಾಲಿಕ್ ಹಿಂದುತ್ವದ ಬಗ್ಗೆ ನಾನು ಮಾತನಾಡುವಷ್ಟು ದೊಡ್ಡವಳಲ್ಲ.ಆದರೆ ಕಾರ್ಕಳಕ್ಕೆ ತನ್ನದೇ ಶಿಷ್ಯ ಇರುವ ಕ್ಷೇತ್ರಕ್ಕೆ ಯಾಕೆ ಬಂದರು ಎಂದು ಪ್ರಶ್ನೆ ಮಾಡಬೇಕು. ತನ್ನದೇ ಶಿಷ್ಯ ಸುನೀಲ್ ಕುಮಾರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ನಕಲಿ ಹಿಂದುತ್ವದ ಬಗ್ಗೆ, ಕಾರ್ಕಳದಲ್ಲಿ ನಡೆಯುತ್ತಿರುವ ಸರಣಿ ಗೋಕಳ್ಳತನದ ಬಗ್ಗೆ ಮುತಾಲಿಕ್ ಸುನೀಲ್ ಕುಮಾರ್ ವಿರುದ್ಧ ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿಯವರ ಬೆಂಬಲ ಇದೆ ಎಂದು ಅವರೇ ಹೇಳುತ್ತಿರುವಾಗ ಬಹುಶಃ ಒಬ್ಬ ಗುರು ಶಿಷ್ಯನ ವಿರುದ್ಧ ಸುಖ ಸುಮ್ಮನೆ ಆರೋಪ ಮಾಡುತ್ತಾರೆಯೇ? ಆದುದರಿಂದ ಎಲ್ಲಿ ಸಮಸ್ಯೆ ಇದೆ ಆ ಸಮಸ್ಯೆಯನ್ನು ಹೊರಗಿಟ್ಟು ಕೆಲಸ ಮಾಡಿದರೆ ಮುತಾಲಿಕ್ ಕೂಡ ನಮ್ಮೊಂದಿಗೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮಹಿಳೆಗೆ ಕಾರ್ಕಳದ ಜನತೆ ಅವಕಾಶ ನೀಡುತ್ತಾರೆಯೇ?
ನೀವು ಗ್ರಾಮಪಂಚಾಯತ್, ಜಿಲ್ಲಾ ಪಂಚಾಯತ್ ಕಾರ್ಕಳ ಪುರಸಭೆಯನ್ನೇ ಗಮನಿಸಿ ಎಷ್ಟು ಜನ ಮಹಿಳೆಯರು ಇದ್ದಾರೆ. ಅದೆಷ್ಟೋ ಕಡೆ ಮಹಿಳೆಯರೇ ಗ್ರಾಮಪಂಚಾಯತ್ ಸದಸ್ಯರಿದ್ದಾರೆ. ಪುರಸಭೆಯ ಅಧ್ಯಕ್ಷರೇ ಇದ್ದಾರೆ. ಹೀಗಿರುವಾಗ ಜನತೆ ಬೆಂಬಲ ನೀಡಿಯೇ ನೀಡುತ್ತಾರೆ. ಮಹಿಳೆಯರು ಸ್ಪರ್ಧಿಸಿದ ಅದೆಷ್ಟೋ ಕಡೆ ಗೆದ್ದಿದ್ದಾರೆ. ಮಹಿಳೆಯರು ಚುನಾವಣೆಗೆ ನಿಲ್ಲುವ ಧೈರ್ಯ ಮಾಡಬೇಕು. ನನಗೆ ಆ ಧೈರ್ಯ ಇದೆ. ಕಾರ್ಕಳದ ಜನತೆ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ.
ನಾನು ದುಡ್ಡುಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬರುತ್ತಿಲ್ಲ. ಇವತ್ತು ದುಡ್ಡು ಚೆಲ್ಲಿ ಮತವನ್ನು ಖರೀದಿ ಮಾಡಬೇಕು ಎನ್ನುವ ಮಾತಿದೆ. ನಾನು ಶಿಕ್ಷಕಿಯಾಗಿದ್ದವಳು. ದುಡ್ಡು ಮಾಡಲು ಸಾಕಷ್ಟು ಅವಕಾಶ ಇದ್ದಾಗಲೂ ನಿರಾಕರಿಸಿದ್ದೇನೆ. ನಮ್ಮದು ಶ್ರೀಮಂತ ಮನೆತನ. ಆದುದರಿಂದ ದುಡ್ಡು ನನ್ನ ಗುರಿಯೇ ಅಲ್ಲ. ನಾನು ಜೋಳಿಗೆ ಹಿಡಿಕೊಂಡು ಬಂದಿದ್ದೇನೆ ಎಂದು ಸುಳ್ಳು ಹೇಳುವುದಿಲ್ಲ. ದುಡ್ಡಿಗಿಂತ ವಿದ್ಯೆಯನ್ನು ಸಂಪಾದನೆ ಮಾಡಿದ್ದೇನೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಬೋಧಿಸಿದ್ದೇನೆ ಎಂಬ ಹೆಮ್ಮೆ ಇದೆ.
ಮಹಿಳೆಯರು ಗೆದ್ದಾಗ ಅವರ ಪತಿ ಅಥವಾ ಇನ್ಯಾರಾದರೂ ನಿಯಂತ್ರಣ ಮಾಡುತ್ತಾರೆ ಅನ್ನುತ್ತಾರೆ ಆದರೆ ನನ್ನ ಮನೆಯವರೆಲ್ಲ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಅದರಿಂದ ನನ್ನ ರಾಜಕೀಯ ಜೀವನದಲ್ಲಿ ಯಾರದ್ದು ಹಸ್ತಕ್ಷೇಪ ಇಲ್ಲ.
ನನ್ನದು ಶಿಕ್ಷಣ-ಉದ್ಯೋಗ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ. ಶಿಕ್ಷಕ್ಕೆ ಈ ಕ್ಷೇತ್ರದ ಜನಪ್ರತಿನಿಧಿಗಳ ಕೊಡುಗೆ ಏನು?ಪ್ರತೀ ವರ್ಷ ಪದವಿ ಅಥವಾ ಉನ್ನತ ಶಿಕ್ಷಣ ಮುಗಿಸಿ ಬರುವ ಇಲ್ಲಿನ ವಿದ್ಯಾವಂತರ ಭವಿಷ್ಯ ಏನು?ರಸ್ತೆಗಳನ್ನು, ಭವನಗಳನ್ನು, ಉತ್ಸವಗಳನ್ನು ಮಾಡುವುದು ಮಾತ್ರ ಅಭಿವೃದ್ಧಿಯೇ? ಇವತ್ತು ಕಾರ್ಕಳದಿಂದ ಶಿಕ್ಷಣ ಪಡೆದವರು ಮುಂಬೈ ನಲ್ಲಿ ಬೆಂಗಳೂರಿನಲ್ಲಿ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ಸ್ನೇಹ ಸಮ್ಮಿಲನ ಮಾಡುವುದು ನಮ್ಮ ಮುಖಕ್ಕೆ ನಾವೇ ಸೆಗಣಿ ಮೆತ್ತಿಕೊಂಡ ಹಾಗಲ್ಲವೇ? ಕಾರ್ಕಳದ ಜನತೆ ಇದನ್ನೆಲ್ಲಾ ಗಮನಿಸುತ್ತಾ ಇದ್ದಾರೆ ಎಂದು ನಂಬಿದ್ದೇನೆ. ಇವರಿಗೆ ಬೈಕ್ ರ್ಯಾಲಿಗೆ, ಹಿಂಬಾಲಕರಾಗಿ ಜೈ ಹೇಳಲು ಯುವಕರು ಬೇಕು ಆದರೆ ಅದೇ ಯುವಕರ ಭವಿಷ್ಯದ ಬಗ್ಗೆ ಎಂದಾದರೂ ಯೋಚನೆ ಮಾಡಿದ್ದಾರೆಯೇ?.
ಕೊನೆಕ್ಷಣದಲ್ಲಿ ಕ್ಷೇತ್ರಬಿಟ್ಟು ಒಡಿಹೋಗುತ್ತಾಳೆ ಎಂಬ ಅಪಪ್ರಚಾರ ಈಗಾಗಲೇ ಪ್ರಾರಂಭಿಸಿದ್ದಾರೆ. ನಾನು ಕಾರ್ಕಳದಲ್ಲಿಯೇ ಹುಟ್ಟಿದ್ದೇನೆ ಕಾರ್ಕಳದಲ್ಲಿಯೇ ಜನ ಸೇವೆ ಮಾಡುತ್ತೇನೆ. ಕಾರ್ಕಳದಲ್ಲಿಯೇ ಚುನಾವಣೆಗೆ ನಿಲ್ಲುತ್ತೇನೆ. ಹಿಂದಿರುಗಿ ಹೋಗುವ ಪ್ರಶ್ನೆಯೇ ಇಲ್ಲ ಎಂದು ಮಮತಾ ಹೆಗ್ಡೆ ಹೇಳಿದ್ದಾರೆ.