ಕಾರವಾರ: ನಗರದ ಫುಟ್ಪಾತ್ ಆಕ್ರಮಿಸಿ ತೊಂದರೆ ನೀಡುತ್ತಿರುವ ಹೊರಗಿನ ಬೀದಿ ವ್ಯಾಪಾರಿಗಳನ್ನು ತೆರವು ಮಾಡುವಂತೆ ಜಯ ಕರ್ನಾಟಕ ಜನಪರ ವೇದಿಕೆಯಿಂದ ನಗರಸಭೆಯ ಪೌರಾಯುಕ್ತ ಆರ್.ಪಿ. ನಾಯ್ಕ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕಾರವಾರೇತರ ವ್ಯಕ್ತಿಗಳು ಕಾರವಾರ ನಗರದ ಫುಟ್ಪಾತ್ ಅತಿಕ್ರಮಿಸಿ ವ್ಯಾಪಾರ ಮಾಡುತ್ತಿದ್ದು, ಇದರಿಂದಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಫುಟ್ಪಾತ್ ಮೇಲೆ ಸಂಚರಿಸಲು ಸಾಧ್ಯವಾಗದೇ ರಸ್ತೆಯಲ್ಲೇ ಜನರು ನಡೆದು ಹೋಗುವ ಪರಿಸ್ಥಿತಿಯಿದ್ದು, ಇದರಿಂದಾಗಿ ವಾಹನಗಳ ಭಯ ಕಾಡುತ್ತದೆ. ಈಗಾಗಲೇ ಹೂವು ಹಣ್ಣು ವ್ಯಾಪಾರಿಗಳಿಗೆ ನಗರಸಭೆಯ ವತಿಯಿಂದ ಪ್ರತ್ಯೇಕ ವ್ಯವಸ್ಥೆ ಮಾಡಿದರೂ ಅದನ್ನು ಬಿಟ್ಟು, ರಸ್ತೆ ಬದಿಯಲ್ಲಿ ಅತಿಕ್ರಮಿಸಿ ವ್ಯಾಪಾರ ಮಾಡುತ್ತಿದ್ದು, ಸ್ಥಳೀಯ ಸಣ್ಣಪುಟ್ಟ ವ್ಯಾಪಾರಿಗಳಿಗೂ ಕಿರಿಕಿರಿ ಆಗುವಂತೆ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಸೂಚನೆ ನೀಡಲು ಹೋದ ನಗರಸಭೆಯ ಸಿಬ್ಬಂದಿಗಳ ಮೇಲೆಯೇ ಹಲ್ಲೆ ಮಾಡಿದ್ದಾರೆ. ಸ್ಥಳೀಯರಲ್ಲದ ವ್ಯಾಪಾರಿಗಳು ಹೊರಗಿನಿಂದ ಬಂದು ನಗರಾಡಳಿತಕ್ಕೇ ಸವಾಲು ಹಾಕುವುದು, ಅಲ್ಲದೇ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿರುವುದು ನೋಡಿದರೆ ಇವರದ ಅತಿರೇಕ ಎನಿಸುತ್ತದೆ. ನಮ್ಮ ಸಂಘಟನೆಯು ಇವರ ವಿರುದ್ಧ ಖಂಡಿಸುತ್ತೇವೆ ಇಂತಹುದಕ್ಕೆ ಅವಕಾಶ ಕೊಡದೇ ಸ್ಥಳೀಯರಿಗೆ ಮಾತ್ರ ಅವಕಾಶ ನೀಡಿ ಹೊರಗಿನ ವ್ಯಾಪಾರಿಗಳಿಗೆ ಫುಟ್ಪಾತ್ ಮೇಲೆ ವ್ಯಾಪಾರಕ್ಕೆ ಅವಕಾಶ ನೀಡದೇ ಅವರಿಗೆ ನಿಗದಿಸಿ ಸ್ಥಳದಲ್ಲೇ ವ್ಯಾಪಾರ ಮಾಡುವಂತೆ ಕ್ರಮ ಕೈಗೊಳ್ಳಬೇಕು.
ನಗರಸಭೆ ಪೌರಾಯುಕ್ತರಿಗೆ ಮನವಿ ನೀಡುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ದಿಲೀಪ್ ಜಿ ಅರ್ಗೇಕರ್, ಜಿಲ್ಲಾ ಕಾರ್ಯಾಧ್ಯಕ್ಷ ರೋಷನ್ ಹರಿಕಂತ್ರ, ಜಿಲ್ಲಾ ಸಂಚಾಲಕ ಗೋಪಾಲ ಗೌಡ, ರಾಜೇಶ್ ಹರಿಕಂತ್ರ ಸಮೀರ್ ಶೆಜ್ವಾಡ್ಕರ್, ಮೋಹನ್ ಉಳೇಕರ್, ಸುದೇಶ್ ನಾಯ್ಕ ರಾಮಕಾಂತ್ ನಾಯ್ಕ, ಸುನಿಲ್ ತಾಂಡೇಲ್, ವಿನಯ್ ನಾಯ್ಕ, ವಿಶಾಲ್ ಹಾಗೂ ಹಲವಾರು ಸಂಘಟನೆ ಕಾರ್ಯಕರ್ತರು ಇದ್ದರು.