ಮೈಸೂರು: ಜನಪ್ರತಿನಿಧಿ ಅಲ್ಲದ ನೀವು ಸರ್ಕಾರಿ ಕಾಮಾಗಾರಿಗೆ ಚಾಲನೆ ನೀಡಲು ಗ್ರಾಮಕ್ಕೆ ಏಕೆ ಬಂದಿದ್ದೀರಿ ಎಂದು ಸಚಿವರ ಪುತ್ರನನ್ನ ಪ್ರಶ್ನೆ ಮಾಡಿದ ಇಬ್ಬರು ಯುವಕರನ್ನ ಪೊಲೀಸರು ಬಂಧಿಸಿರುವ ಘಟನೆ ಟಿ.ನರಸೀಪುರ ಕ್ಷೇತ್ರದ ಕುಕ್ಕೂರು ಗ್ರಾಮದಲ್ಲಿ ನಡೆದಿದೆ.
ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ತಮ್ಮ ಕ್ಷೇತ್ರದ ಮತದಾರರ ಮೇಲೆ ಮತ್ತೊಮ್ಮೆ ದರ್ಪ ತೋರಿಸಿದ್ದು ಸಚಿವ ಮಹದೇವಪ್ಪ ಪ್ರತಿನಿಧಿಸುವ ತಿ. ನರಸೀಪುರ ಕ್ಷೇತ್ರ ವ್ಯಾಪ್ತಿಗೆ ಬರುವ ಕುಕ್ಕೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿಪೂಜೆ ನೆರವೇರಿಸಲು ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಹೋಗಿದ್ದಾಗ ಆ ಗ್ರಾಮದ ಯುವಕರಾದ ಪ್ರವೀಣ್ ಮತ್ತು ಶಿವಮೂರ್ತಿ ಪ್ರಶ್ನೆ ಮಾಡಿದ್ದಾರೆ.
ನಮ್ಮೂರಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದನ್ನು ಹೇಳಿಕೊಳ್ಳಲು ಸಚಿವರು ಬರುತ್ತಾರೆಂದು ನಾವೆಲ್ಲಾ ಕಾದಿದ್ದೆವು. ಅವರು ಬಾರದೆ ನಿಮ್ಮನ್ನು ಕಳುಹಿಸಿದ್ದಾರೆ. ನೀವು ಕ್ಷೇತ್ರದ ಶಾಸಕರಲ್ಲಾ, ನೀವ್ಯಾಕೆ ಗುದ್ದಲಿಪೂಜೆ ಮಾಡುತ್ತಿದ್ದೀರಿ, ನಿಮ್ಮ ತಂದೆಯವರನ್ನೇ ಕಳುಹಿಸಿ ಅಂತಾ ಯುವಕರು ಕೇಳಿದ್ದೇ ತಪ್ಪಾಯಿತು. ತಕ್ಷಣ ಕೆರಳಿ ಕೆಂಡಾಮಂಡಲರಾದ ಸುನಿಲ್ ಬೋಸ್ ಸ್ಥಳದಲ್ಲಿದ್ದ ಪೊಲೀಸರಿಗೆ ಇಬ್ಬರೂ ಯುವಕರನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಸೂಚಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ. ಸಚಿವರ ಪುತ್ರನ ಆದೇಶವನ್ನು ಶಿರಸಾವಹಿಸಿ ಪಾಲನೆ ಮಾಡಿರುವ ತಲಕಾಡು ಪೊಲೀಸರು ಇಬ್ಬರೂ ಯುವಕರ ಮೇಲೆ ಸೆಕ್ಷನ್ 107 ಅಡಿ ಕೇಸು ಜಡಿದು, ನಿನ್ನೆ ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲೇ ಇರಿಸಿಕೊಂಡು ಧಮಕಿ ಹಾಕಿದ್ದಲ್ಲದೆ, ಇಂದು ಬೆಳಿಗ್ಗೆ ತಹಸೀಲ್ದಾರ್ ಮುಂದೆ ಹಾಜರುಪಡಿಸಿದ್ದಾರೆ.
ಮೂರು ಕಾಮಾಗಾರಿಗೆ ಗುದ್ದಲಿ ಪೂಜೆ:
ಟಿ.ನರಸೀಪುರ ಕ್ಷೇತ್ರದ ಗ್ರಾಮ ಪಂಚಯತಿಯ ಸದಸ್ಯನೂ ಅಲ್ಲ, ಶಾಸಕನೂ ಅಲ್ಲ ಕೇವಲ ಸಚಿವರ ಪುತ್ರ ಎಂಬ ಕಾರಣಕ್ಕಾಗಿ ತಂದೆ ಮಾಡಬೇಕಾದ ಸರ್ಕಾರಿ ಕಾಮಾಗಾರಿಗಳಿಗೆ ಚಾಲನೆ ನೀಡುತ್ತ ಅಧಿಕಾರ ದುರಪಯೋಗ ಪಡಿಸಿಕೊಳ್ಳುತ್ತಿರುವ ಸುನೀಲ್ ಪ್ರತಿ ನಿತ್ಯವೂ ಕೋಟ್ಯಂತರ ರೂಪಾಯಿ ಕಾಮಾಗಾರಿಗೆ ಚಾಲನೆ ನೀಡುತ್ತಿದ್ದು ಒಂದೇ ದಿನ ಮೂರು ಕಾಮಾಗಾರಿಗೆ ಗುದ್ದಲಿ ಪೂಜೆ ಮಾಡುತ್ತ ದರ್ಪ ಮೆರೆಯುತ್ತಿದ್ದು ಇದನ್ನ ಪ್ರಶ್ನೆ ಮಾಡಿದರೆ ಪೊಲೀಸರ ಮೂಲಕ ಕಿರುಕುಳ ಕೊಡುತ್ತಿರುವ ಸಚಿವನ ಪುತ್ರನ ವಿರುದ್ದ ಪ್ರಗತಿಪರರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.