ಮೈಸೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಮೈಸೂರು ನಗರ ವಿಶ್ವವಿದ್ಯಾನಿಲಯದ ಸರಹದ್ದಿನ ಕುಕ್ಕರಹಳ್ಳಿ ಕೆರೆ ಧೋಬಿಘಾಟ್ ಮುಂಭಾಗದಲ್ಲಿ ನೂತನವಾಗಿ ಸ್ಥಾಪಿಸಲಾಗುವ 66/11 ಕೆವಿ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪ ಕೇಂದ್ರದ ಶಂಕು ಸ್ಥಾಪನೆಯನ್ನು ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೆರವೇರಿಸಿ ಮಾತನಾಡಿದರು.
ಈ ಉಪಕೇಂದ್ರದ ಯೋಜನಾ ವೆಚ್ಚ 35.21 ಕೋಟಿ ರೂ. ಆಗಿದ್ದು, ಇದರಿಂದ ವಾರ್ಷಿಕ 4.38 ಲಕ್ಷ ಯೂನಿಟ್ ಹಾಗೂ ರೂ. 25.88 ಲಕ್ಷ ಉಳಿತಾಯವಾಗಲಿದೆ. ಧೋಬಿ ಘಾಟಿನ ಸರಹದ್ದಿನಲ್ಲಿರುವ ಡಿಸಿ ಕಚೇರಿ, ಸರಸ್ವತಿಪುರಂ, ಜಿಲ್ಲಾ ಪಂಚಾಯಿತಿ ಕಚೇರಿ, ಕಲಾಮಂದಿರ, ಕೋರ್ಟ್ ಸಂಕೀರ್ಣ, ಮಾನಸ ಗಂಗೋತ್ರಿ ಆವರಣ, ಕುವೆಂಪುನಗರದ ಕೆಲವು ಭಾಗಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುವುದು. ವಿದ್ಯುತ್ ಅಡಚಣೆಗಳು ಕಡಿಮೆಯಾಗುವುದರ ಜೊತೆಗೆ ವೋಲ್ಟೇಜ್ ಸುಧಾರಣೆ ಸಹ ಆಗಲಿದೆ ಎಂದರು.
ಧೋಬಿ ಘಾಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿಜಯನಗರ, ಭೋಗಾದಿ, ಎಫ್ಟಿಎಸ್ ಹಾಗೂ ಡಿ.ಕೆ.ಮೈದಾನ ವಿದ್ಯುತ್ ಉಪಕೇಂದ್ರಗಳಿಂದ ವಿದ್ಯುತ್ ಪೂರೈಸುತ್ತಿದ್ದು, ವಿದ್ಯುತ್ ಅಡಚಣೆಗಳು ಹಾಗೂ ವೋಲ್ಟೇಜ್ ವ್ಯತ್ಯಯವಾಗುತ್ತಿದ್ದು, ಈ ಹೊಸ ಉಪ ಕೇಂದ್ರದ ಸ್ಥಾಪನೆಯಿಂದ ತೊಂದರೆಗಳು ನಿವಾರಣೆಯಾಗುತ್ತದೆ ಎಂದರು.
ಇದೇ ರೀತಿ ಮೈಸೂರಿನ 3 ವಿವಿಧ ಭಾಗಗಳಲ್ಲಿ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪ ಕೇಂದ್ರವನ್ನು ಸ್ಥಾಪಿಸುವುದರಿಂದ ವಿದ್ಯುತ್ ಸಮಸ್ಯೆಯನ್ನು ನಿವಾರಿಸಬಹುದಾಗಿದ್ದು, ಹೊಸ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಮೈಸೂರು ಜಿಲ್ಲೆಯ ಅಭಿವೃದ್ಧಿಗಾಗಿ ಹಲವಾರು ಕಾಮಗಾರಿಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ಯೋಜನೆ ರೂಪಿಸಿ ಅನುದಾನ ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ ಚಿಂತಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ವಾಸು, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಎಂ.ಜೆ. ರವಿಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಹೆಚ್.ಎ. ವೆಂಕಟೇಶ್, ಮಾಜಿ ಮಹಾಪೌರರು ಹಾಲಿ ಸದಸ್ಯ ಆರ್. ಲಿಂಗಪ್ಪ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.