ಮೈಸೂರು: ವಿಜಯ ನಗರ ಒಂದನೇ ಹಂತದಲ್ಲಿರುವ ಶ್ರೀ ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ 4ಗಂಟೆಯಿಂದ ತಿರುಪತಿ ಮಾದರಿಯ ಲಡ್ಡುಗಳನ್ನುಹಾಗೂ ಪುಳಿಯೋಗರೆಯನ್ನು ಭಕ್ತಾದಿಗಳಿಗೆ ಪ್ರೊ.ಭಾಷ್ಯಂ ಸ್ವಾಮೀಜಿ ವಿತರಿಸಿದರು.
ನೂತನ ವರ್ಷಾಚರಣೆಯ ಪ್ರಯುಕ್ತ ದೇವಸ್ಥಾನದಲ್ಲಿ ಲಡ್ಡುವನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿದ್ದು, ಭಾನುವಾರ ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಭಕ್ತಾದಿಗಳು ಲಡ್ಡು ಪ್ರಸಾದವನ್ನು ಸ್ವೀಕರಿಸಿದರು.
ಬೆಳಿಗ್ಗೆ 4ಗಂಟೆಯಿಂದಲೇ ದೇವರಿಗೆ ಧಾರ್ಮಿಕ ವಿಧಿ ವಿಧಾನಗಳು ನಡೆದಿದ್ದು, ದೇವರಿಗೆ ಹತ್ತು ಕ್ವಿಂಟಾಲ್ ಪುಳಿಯೋಗರೆ ನೈವೇದ್ಯ ಮಾಡಲಾಗಿದೆ.
ಭಕ್ತಾದಿಗಳಿಗೆ ಪ್ರಸಾದ ವಿತರಣೆಗಾಗಿ ಎರಡು ಲಕ್ಷ ಲಡ್ಡು ತಯಾರಿಸಲಾಗಿದ್ದು, ಲಡ್ಡು ತಯಾರಿಕೆಗೆ 50ಕ್ವಿಂಟಾಲ್ ಕಡಲೆಹಿಟ್ಟು, 100ಕ್ವಿಂಟಾಲ್ ಸಕ್ಕರೆ, 4000ಲೀಟರ್ ಖಾದ್ಯ ತೈಲ, 100ಕೆ.ಜಿ.ಗೋಡಂಬಿ, 100ಕೆ.ಜಿ.ಒಣದ್ರಾಕ್ಷಿ, 50ಕೆ.ಜಿ.ಬಾದಾಮಿ, 50ಕೆ.ಜಿ.ಡೈಮಂಡ್ ಸಕ್ಕರೆ, 500ಕೆ.ಜಿ.ಬೂರಾ ಸಕ್ಕರೆ, 10ಕೆ.ಜಿ.ಪೆಸ್ತಾ, 20ಕೆ.ಜಿ.ಏಲಕ್ಕಿ, 20ಕೆ.ಜಿ. ಜಾಕಾಯಿ ಮತ್ತು ಜಾಪತ್ರೆ, 5ಕೆ.ಜಿ. ಪಚ್ಚೆ ಕರ್ಪೂರ, 50ಕೆ.ಜಿ.ಲವಂಗಗಳನ್ನು ಬಳಸಲಾಗಿದೆ.