ಮೈಸೂರು: ಬೆಳಗಾವಿ ಜಿಲ್ಲೆಯ ನೀಡೋಣಿಯಲ್ಲಿ ಕಿಡಿಗೇಡಿಗಳು ಬಸವಣ್ಣನವರ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿರುವುದನ್ನು ಖಂಡಿಸಿ ಮೈಸೂರು ಅಖಿಲ ಭಾರತೀಯ ವೀರಶೈವ ಪರಿಷತ್ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರಿನ ಅಗ್ರಹಾರದ ಬಸವೇಶ್ವರ ಪ್ರತಿಮೆ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ 12ನೇ ಶತಮಾನದಲ್ಲಿಯೇ ಮಾನವೀಯತೆ ಹಾಗೂ ಭ್ರಾತೃತ್ವದ ಸಂದೇಶವನ್ನು ಲಿಂಗಾಯತ ಧರ್ಮದ ಮೂಲಕ ವಿಶ್ವಜ್ಯೋತಿ ಬಸವೇಶ್ವರರು ಜಗತ್ತಿಗೇ ಸಾರಿದ್ದಾರೆ. ಅಂಥಹವರಿಗೆ ಕೆಲವು ಕಿಡಿಗೇಡಿಗಳು ಬೆಳಗಾವಿ ಜಿಲ್ಲೆಯ ನೀಡೋಣಿ ತಾಲೂಕಿನಲ್ಲಿ ಅವಮಾನ ಮಾಡಿರುವುದು ಖಂಡನೀಯ. ಇದು ಇಡೀ ಮಾನವ ಕುಲಕ್ಕೆ ಮಾಡಿದ ಅವಮಾನವಾಗಿದೆ. ಈ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.