ಮೈಸೂರು: ಶಿವತತ್ವ ಹಾಗೂ ಸಮಾನತೆಯಲ್ಲಿ ಅಗಾಧ ನಂಬಿಕೆ ಇಟ್ಟಿದ್ದ ಅಂಬಿಗರ ಚೌಡಯ್ಯ ಅವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಸಮಾನತೆಯ ಮಹತ್ವವವನ್ನು ಸಾರಿದ್ದಾರೆ ಎಂದು ಖ್ಯಾತ ಸಾಹಿತಿ ಹಾಗೂ ಚಿಂತಕ ಡಾ: ಕಾಳೇಗೌಡ ನಾಗವಾರ ಅವರು ಅಭಿಪ್ರಾಯಪಟ್ಟರು.
ಅವರು ಇಂದು ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯಲ್ಲಿ ಆಯೋಜಿಸಲಾದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ನಾನು ಮಾತ್ರ ಬದುಕಬೇಕು ಎಂಬ ಸ್ವಾರ್ಥವನ್ನು ದೂರಮಾಡಿಕೊಳ್ಳಬೇಕು. ಸಮಾಜದಲ್ಲಿ ಸಕಲ ಜೀವರಾಶಿಗಳು ಒಟ್ಟಾಗಿ ಬದುಕಬೇಕು ಎಂಬ ಮಂಗಳಕರ ಚಿಂತನೆಯನ್ನು ಬೆಳಿಸಿಕೊಳ್ಳಬೇಕು. ಮೌಡ್ಯ ಕಂದಚಾರವನ್ನು ತಿದ್ದುವಲ್ಲಿ ಹಾಗೂ ಜನರನ್ನು ಕತ್ತಲಿಂದ ಬೆಳಕಿನ ಕಡೆಗೆ ತರುವಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪಾತ್ರ ಪ್ರಮುಖವಾಗಿದೆ ಎಂದರು.
ಅಂಬಿಗರ ಚೌಡಯ್ಯ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ. ಅವರು ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಸ್ಥಾನ ದೊರಕಬೇಕು ಎಂದು ಪ್ರತಿಪಾದಿಸಿದರು. ಕನ್ನಡ ಸಾರಸ್ವತ ಲೋಕದಲ್ಲಿ ಅಂಬಿಗರ ಚೌಡಯ್ಯ ಶರಣರಿಗೆ ವಿಶಿಷ್ಟ ಸ್ಥಾನಮಾನವಿದ್ದು, ಅವರು ಬಿಟ್ಟು ಹೋದ ವಚನ ಸಾಹಿತ್ಯ, ಸಾಮಾನ್ಯ ಜನರಿಂದ ಸಾಮಾನ್ಯ ಜನರ ಸಾಹಿತ್ಯವಾಗಿದೆ ಎಂದರು.
ಮೈಸೂರು ಉಪವಿಭಾಗಾಧಿಕಾರಿ ಸಿ.ಎಲ್ ಆನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರ ವಿವಿಧ ಜಯಂತಿಗಳನ್ನು ಆಚರಿಸುತ್ತದೆ. ಸಣ್ಣ ಸಮುದಾಯಗಳಲ್ಲಿರುವವರು ಇಂತಹ ಜಯಂತಿ ನಡೆಸಿದ ಸಂದರ್ಭದಲ್ಲಿ ಒಟ್ಟಿಗೆ ಸೇರಿ ಚಿಂತನೆ ನಡೆಸಿ ಸಮುದಾಯದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಬೇಕು ಎಂದರು.
ಸಣ್ಣ, ಸಣ್ಣ ಸಮುದಾಯಗಳು ಸಹ ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಸಣ್ಣ ಸಣ್ಣ ಸಮುದಾಯಗಳು ಜಯಂತಿ ಆಚರಿಸಿದ ಸಂದರ್ಭದಲ್ಲಿ ಸಮುದಾಯದಲ್ಲಿರುವ ನಿರ್ಗತಿಕರು, ಶೈಕ್ಷಣಿಕವಾಗಿ ಹಿಂದುಳಿದವರು, ವಿಕಲಚೇತನರು, ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ಮಹಾನಗರಪಾಲಿಕೆ ಸದಸ್ಯೆ ಇಂದ್ರ ಮಹೇಶ್ ಅವರು ಅಂಬಿಗರ ಚೌಡಯ್ಯನಂತ ಶರಣರ ಜಯಂತಿಯನ್ನು ಆಚರಿಸುವುದರ ಮೂಲಕ ಅವರ ಆದರ್ಶ ಗುಣಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಇದಕ್ಕೂ ಮುನ್ನ ನಿಜಶರಣ ಅಂಬಿಗರ ಚೌಡಯ್ಯ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮೈಸೂರು ತಹಶೀಲ್ದಾರ್ ರಮೇಶ್ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಭಾಗವಹಿಸಿದರು.