ಮೈಸೂರು: ಕಾಂಗ್ರೆಸ್ -ಜೆಡಿಎಸ್ ರಾಜ್ಯ ಸಮ್ಮಿಶ್ರ ಸರ್ಕಾರ ಸರಕಾರಿ ಯಂತ್ರವನ್ನು ಸಂಪೂರ್ಣ ದುರ್ಬಳಕೆ ಮಾಡಿಕೊಂಡು ಬಂದ್ ನಡೆಸುತ್ತಿದ್ದು, ಇದು ಪ್ರಾಯೋಜಿತ ಬಂದ್ ಆಗಿದೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಬಂದ್ ಯಶಸ್ವಿಗೊಳಿಸಲೆಂದೇ ಸರ್ಕಾರ ಪ್ರತಿಭಟನೆ ನೆಪದಲ್ಲಿ ಶಾಲಾ ಕಾಲೇಜುಗಳನ್ನು, ಸಾರಿಗೆ ಸಂಚಾರ, ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿ ಬಂದ್ಗೆ ಕುಮ್ಮಕ್ಕು ನೀಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಂದ್ಗೆ ಸರ್ಕಾರದಿಂದ ಸಹಕಾರ ನೀಡುವ ಮೂಲಕ ರಾಹುಲ್ ಗಾಂಧಿ ಅವರ ಋಣ ತೀರಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿಗಳ ಮೂಲಕ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಸಿ, ಕೆಎಸ್ಆರ್ಟಿಸಿ ಬಸ್ಗಳನ್ನು ಮಧ್ಯಾಹ್ನದವರೆಗೆ ತೆಗೆಯದಂತೆ ಸೂಚನೆ ನೀಡಿ ಬಂದ್ ಯಶಸ್ಸುಗೊಳಿಸುವ ತಂತ್ರ ಮಾಡಿದ್ದಾರೆ ಎಂದು ದೂರಿದರು.
ನಾವು ಹಿಂದೆ ಮಂಗಳೂರು ಚಲೋ ಮಾಡಿದ್ದಾಗ ಬಂದ್ ಮಾಡುವವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದರು. ಈಗ ಸಚಿವ ಯು.ಟಿ.ಖಾದರ್ ಚಪ್ಪಲಿಯನ್ನು ಎಲ್ಲಿ ಇಟ್ಟುಕೊಂಡಿದ್ದಾರೆ ಪ್ರಶ್ನಿಸಿದ ಅವರು, ಈಗ ಚಪ್ಪಲಿಯಲ್ಲಿ ನಾವು ಯಾರಿಗೆ ಹೊಡೆಯಬೇಕು ಎಂದು ಹೇಳಿ ಪ್ರಶ್ನಿಸಿದರು.
ಭಾರತ್ ಬಂದ್ಗೆ ಬೆಂಬಲ ನೀಡಿದ ಮಾಜಿ ಪ್ರಧಾನಿ ದೇವೇಗೌಡರು, ನಿರಂತರವಾಗಿ ಏರುತ್ತಿರುವ ಕಚ್ಚಾ ತೈಲ ಬೆಲೆ, ಡಾಲರ್ ಎದುರು ರೂಪಾಯಿ ಕುಸಿತ ತಡೆಯುವುದು ಹೇಗೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾರ್ಗದರ್ಶನ ಹಾಗೂ ಸಲಹೆ ಸೂಚನೆಗಳನ್ನು ನೀಡಲಿ ಎಂದು ಹೇಳಿದರು.
ಡಾಲರ್ ಎದುರು ರೂಪಾಯಿಯ ಮೌಲ್ಯ ಕುಸಿತವಾಗುವುದನ್ನು ತಡೆಗಟ್ಟಲು ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳುವ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಯಿಂದಾಗಿ ದೇಶದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದಿತ್ತು, ಅಲ್ಲದೇ 2 ಲಕ್ಷ ಕೋಟಿ ರೂ.ಗಳ ತೈಲಬಾಂಡ್ ಗಳನ್ನು 12 ವರ್ಷಗಳ ಕಾಲಾವಧಿಗೆ ಅಡವಿಟ್ಟಿದ್ದು ಯಪಿಎ ಸರ್ಕಾರ. ಅದರ ಮೇಲಿನ 70 ಲಕ್ಷ ಕೋಟಿ ಬಡ್ಡಿಯನ್ನು ಕೇಂದ್ರ ಭರಿಸಿದೆ. ಹೀಗಿದ್ದರೂ ತಮ್ಮ ವೈಫಲ್ಯಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ ಮೇಲೆ ಹೊರಿಸುತ್ತಿರುವುದು ಯಾವ ನೀತಿ ಎಂದು ಕೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ನಾಗೇಂದ್ರ ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಹೆಚ್.ವಿ.ರಾಜೀವ್, ಮಾಧ್ಯಮ ಸಂಚಾಲಕ ಪ್ರಭಾರಕ ಶಿಂಧೆ ಮೊದಲಾದವರಿದ್ದರು.