ಚಾಮರಾಜನಗರ ; ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನ್ನು ಕಂಡ ವ್ಯಕ್ತಿಯೊಬ್ಬ ಆತನನ್ನು ಹತ್ಯೆ ಮಾಡಿರುವ ಘಟನೆ ಇಲ್ಲಿಗೆ ಸಮೀಪದ ರಾಮಾಪುರ ಬಳಿಯ ಗೆಜ್ಜಲನತ್ತ ಗ್ರಾಮದಲ್ಲಿ ನಡೆದಿದೆ. ಕೊಲೆಗೀಡಾದ ಯುವಕನನ್ನು ಗೆಜ್ಜಲನತ್ತ ಗ್ರಾಮದ ಅರವಿಂದ್ಕುಮಾರ್(೨೨) ಎಂದು ಗುರುತಿಸಲಾಗಿದ್ದು ಅದೇ ಗ್ರಾಮದ ಮುರುಗೇಶ(೪೧) ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಗೆಜ್ಜಲನತ್ತ ಗ್ರಾಮದ ಮುರುಗೇಶ ಎಂಬಾತ ಆದೇ ಗ್ರಾಮದ ಪುಷ್ಪಾ ಎಂಬಾಕೆಯನ್ನು ಕಳೆದ ೧೭ ವರ್ಷದ ಹಿಂದೆ ವಿವಾಹವಾಗಿದ್ದನು. ಈ ಇಬ್ಬರಿಗೂ ೧೫ ವರ್ಷದ ಒಂದು ಹೆಣ್ಣು ಮಗಳೂ ಇದ್ದು, ಮುರುಗೇಶ ಚಾಮರಾಜನಗರ ಸಮೀಪದ ಕಲ್ಲಿನ ಕ್ವಾರಿಯೊಂದರಲ್ಲಿ ಕಾರ್ಮಿಕನಾಗಿ ದುಡಿಯುತಿದ್ದನು. ಈ ಮಧ್ಯೆ ಪುಷ್ಪಾಳಿಗೆ ಅದೇ ಗ್ರಾಮದ ಅರವಿಂದ್ ಕುಮಾರ್ ಎಂಬಾತನ ಪರಿಚಯವಾಗಿದ್ದು, ಪರಿಚಯ ಸ್ನೇಹವಾಗಿ, ಸ್ನೇಹ ಅನೈತಿಕ ಸಂಬಂಧ ತಿರುಗಿದೆ. ಶನಿವಾರ ತಡರಾತ್ರಿ ಮುರುಗೇಶ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ ಆತನ ಮನೆಯಲ್ಲಿಯೇ ಅರವಿಂದ್ ಕುಮಾರ್ ಮತ್ತು ಪುಷ್ಪಾ ಜೊತೆಗಿರುವುದು ಕಂಡುಬಂದಿದೆ.
ಇದರಿಂದ ಆಕ್ರೋಶಿತನಾದ ಮುರುಗೇಶ ಸೌದೆಯನ್ನು ತೆಗೆದುಕೊಂಡು ಅರವಿಂದನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ಆತನ ತಲೆಗೆ ತೀವ್ರ ಗಾಯವಾಗಿದ್ದು ಕೂಡಲೇ ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾನೆ.
ಘಟನೆಯ ಬಳಿಕ ನಾಪತ್ತೆಯಾಗಿರುವ ಆರೋಪಿ ಮುರುಗೇಶನ ಪತ್ತೆಗಾಗಿ ಪೋಲೀಸರು ತಂಡ ರಚಿಸಿ ಬಂಧನಕ್ಕೆ ಬಲೆ ಬೀಸಿದ್ದಾರೆ.