ಮೈಸೂರು: ಗುರುವಾರ ರಾತ್ರಿ ಮೈಸೂರು ಹೊರವಲಯದಲ್ಲಿ ನಡೆದ ಬೈಕ್-ಕಾರು ಢಿಕ್ಕಿಯಲ್ಲಿ ಮೂವರು ಮೃತಪಟ್ಟಿದ್ದರು. ಆದರೆ ಕಾರನ್ನು ಚಲಾಯಿಸುತಿದ್ದು, ಅಪ್ರಾಪ್ತ 14 ವಯಸ್ಸಿನ ಬಾಲಕ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದ್ದು ಪೊಲೀಸರು ಬಾಲಕನ ತಂದೆಯನ್ನು ಬಂದಿಸಿದ್ದಾರೆ.
ಆತ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆತನ ತಂದೆ ಕಾರು ಮಾರಾಟ ಮಳಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಾಲಕನಿಗೆ ಹಲವಾರು ದಿನಗಳಿಂದ ಕಾರು ಚಲಾಯಿಸುವ ಹುಚ್ಚು.
ಎಂದಿನಂತೆ ಬಾಲಕನ ತಂದೆ ಗುರುವಾರ ರಾತ್ರಿ 8 ಗಂಟೆಗೆ ಮನೆಗೆ ಬಂದಿದ್ದಾರೆ. ಜೊತೆಗೆ ಮಾರಾಟ ಮಳಿಗೆಯ ಟ್ರಯಲ್ ಕಾರನ್ನು ತಂದಿದ್ದಾರೆ. ಕಾರನ್ನು ಮನೆಯ ಮುಂದೆ ನಿಲ್ಲಿಸಿ ಅನ್ಯ ಕೆಲಸದ ನಿಮಿತ್ತ ದ್ವಿಚಕ್ರ ವಾಹನದಲ್ಲಿ ತೆರಳಿದ್ದಾರೆ.
ಇದೇ ಸಮಯ ಸಾಧಿಸಿದ ಬಾಲಕ ಕಾರನ್ನು ಚಲಾಯಿಸಿಕೊಂಡು ಹೋಗಿದ್ದು ಆಗಾಗ್ಗೆ ಮನೆಯ ಸುತ್ತಮುತ್ತ ರೌಂಡ್ ಹಾಕುತ್ತಿದ್ದ ಬಾಲಕ ಗುರುವಾರ ಮಾತ್ರ ಧೈರ್ಯ ಮಾಡಿ ಬೆಂಗಳೂರು-ಮೈಸೂರು ರಸ್ತೆಗೆ ತೆರಳಿದ್ದಾನೆ. ಆತನ ತಪ್ಪಿನಿಂದ ಅಪಘಾತದಲ್ಲಿ ಮೂವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ.
ವಿಪರ್ಯಾಸವೆಂದರೆ ಕೆಲ ತಿಂಗಳ ಹಿಂದಷ್ಟೇ ಸಂಚಾರ ವಿಭಾಗದ ಎಸಿಪಿ ಸಂದೇಶ್ ಅವರು ಬಾಲಕ ಓದುತ್ತಿದ್ದ ಶಾಲೆಗೆ ತೆರಳಿ ಸಂಚಾರ ನಿಯಮದ ಬಗ್ಗೆ ಪಾಠ ಹೇಳಿದ್ದರು. ನೀವುಗಳು ಯಾವುದೇ ಕಾರಣಕ್ಕೂ ವಾಹನ ಚಾಲನೆಗೆ ಮುಂದಾಗಬಾರದು ಎಂದು ತಿಳಿಹೇಳಿದ್ದರಂತೆ. ಈ ವಿಚಾರವನ್ನು ಸ್ವತಃ ಬಾಲಕನೇ ಪೊಲೀಸರ ಮುಂದೆ ಹೇಳಿದ್ದಾನೆ!
ಮಗ ಮಾಡಿದ ತಪ್ಪಿನಿಂದ ಮೂವರು ಸಾವಿಗೀಡಾಗಿದ್ದುದನ್ನು ನೆನೆದು ಬಾಲಕನ ಪೋಷಕರು ಕಣ್ಣೀರು ಹಾಕಿದ್ದಾರೆ. ನಿಯಮದ ಪ್ರಕಾರ ಯಾವುದೇ ಪ್ರಕರಣದಲ್ಲಿ ಅಪ್ರಾಪ್ತರು ವಾಹನ ಚಾಲನೆ ಮಾಡಿ ಅಪಘಾತ ನಡೆಸಿದಲ್ಲಿ ಬಾಲಕರ ಪೋಷಕರೇ ಹೊಣೆಗಾರರಾಗುತ್ತಾರೆ. ಅವರ ವಿರುದ್ಧವೇ ಎಫ್ಐಆರ್ ದಾಖಲಾಗುತ್ತದೆ. ವಿಚಾರಣೆ ವೇಳೆ ನ್ಯಾಯಾಲಯ ಅವರಿಗೆ ಕನಿಷ್ಠ 2 ವರ್ಷ ಶಿಕ್ಷೆ ವಿಧಿಸುವ ಸಾಧ್ಯತೆಗಳಿವೆ. ಈ ಪ್ರಕರಣದಲ್ಲಿ ಕೂಡ ಬಾಲಕನ ತಂದೆ ವಿರುದ್ಧ ಎನ್ಆರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.