News Kannada
Wednesday, October 04 2023
ಮೈಸೂರು

ಮೈಸೂರು: ಎಚ್.ಡಿ.ಕೋಟೆಯಲ್ಲಿ ಸಂಕಷ್ಟ ತಂದ ಮಳೆ

Heavy rains hit H.D. Kote
Photo Credit : By Author

ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಕಳೆದ ಜುಲೈ ತಿಂಗಳಲ್ಲಿ ಎಡಬಿಡದೆ ಸುರಿದ ಮಳೆಯ ಪ್ರವಾಹದಿಂದ ಸುಧಾರಿಸಿಕೊಳ್ಳುವ ಮುನ್ನವೇ ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಾಜ್ಯದ ಜೀವನಾಡಿ ಕಬಿನಿ ಜಲಾಶಯ ಸೇರಿದಂತೆ ತಾಲ್ಲೂಕಿನ ಎಲ್ಲ ಜಲಾಶಯಗಳಿಗೆ ಒಳ ಹರಿವು ಜಾಸ್ತಿಯಾಗಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾರೀ ಮಳೆಯಿಂದ ಹಳ್ಳ ಕೊಳ್ಳ ತುಂಬಿ ಹರಿಯುತ್ತಿದ್ದರೆ, ಕೆರೆ ಕಟ್ಟೆ ಕೋಡಿ ಬಿದ್ದು ಹೊಲ ಗದ್ದೆಗಳಿಗೆ ನುಗ್ಗಿದ ಪರಿಣಾಮ ಕಷ್ಟಪಟ್ಟು ಬೆಳೆದ  ಬೆಳೆಗಳು ನೀರು ಪಾಲಾಗಿದೆ. ರೈತರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ಮಳೆಯ ಹಿನ್ನಲೆಯಲ್ಲಿ ಕಬಿನಿ ಜಲಾಶಯಕ್ಕೆ 18 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಗರಿಷ್ಠ ಸಂಗ್ರಹ ಮಟ್ಟ ಕಾಯ್ದುಕೊಂಡು 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ, ಇದರಿಂದಾಗಿ ಮುಂಭಾಗದ ಸೇತುವೆ ಮುಳುಗಡೆಯಾಗಿದ್ದು, 20ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಮತ್ತೊಂದು ಜಲಾಶಯವಾದ ತಾರಕ ಜಲಾಶಯವು ಕೂಡ ರಕ್ಕಸ ಮಳೆಗೆ ಮತ್ತೆ ಭರ್ತಿಗೊಂಡಿದ್ದು ನೀರನ್ನು ನದಿಗೆ ಹರಿಸಲಾಗುತ್ತಿದೆ. ಪರಿಣಾಮ  ಹೆಬ್ಬಳ್ಳ ಜಲಾಶಯದ ಒಳಹರಿವಿನ ಪ್ರಮಾಣ ದಿಢೀರ್ ಹೆಚ್ಚಾಗಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ನಾಲೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದಾಗಿ ಹೊಸ ತೊರವಳ್ಳಿ, ಬೆಳಗನಹಳ್ಳಿ ಇನ್ನಿತರ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ 4ರಿಂದ 5 ಅಡಿ ನೀರು ಹರಿಯುತ್ತಿದ್ದರೂ ನೀರಿನ ರಭಸವನ್ನು ಲೆಕ್ಕಿಸದೇ ಜನರು ಮತ್ತು ಸವಾರರು ಸೇತುವೆ ಮೇಲೆ ತೆರಳುತ್ತಿರುವುದು ಆತಂಕಕಾರಿಯಾಗಿದೆ.

ಇನ್ನು ಹೆಬ್ಬಳ್ಳ ಜಲಾಶಯವು ಮೇ 18ರಂದೇ ಭರ್ತಿಯಾಗಿತ್ತು, ಅಂದು ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಒಮ್ಮೆಲೆ 6ಅಡಿ ನೀರು ತುಂಬಿತ್ತು. ಆಗಾಗ್ಗೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಕಾರಣ ಹೆಬ್ಬಳ್ಳ ಜಲಾಶಯ ಪದೇ ಪದೇ ಕೋಡಿ ಬೀಳುತ್ತಿದೆ. ಕಳೆದ  ಮೂರು ತಿಂಗಳಿನಿಂದ  ಜಲಾಶಯದಿಂದ ನಾಲೆಗೆ ನೀರು ಹರಿಯುತ್ತಿರುವುದು ಇದೇ ಮೊದಲು ಎಂದು ಹೆಬ್ಬಳ್ಳ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ ಮತ್ತೇ ಮಳೆರಾಯ ಒಕ್ಕರಿಸಿಕೊಂಡು ಎಡಬಿಡದೆ ಸುರಿಯುತ್ತಿರುವುದರಿಂದ ರೈತರ ಬದುಕು ದುಸ್ತರವಾಗಿದೆ. ಭಾರೀ ಮೇಘ ಸ್ಪೋಟಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದ್ದು, ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ಜನರು ಮನೆಯಿಂದ ಹೊರ ಬಾರದೆ ಮನೆಯಲ್ಲೇ ಕೂರುವಂತಾಗಿದೆ. ದುಡಿದು ಜೀವನ ಕಟ್ಟಿಕೊಂಡಿದ್ದ ಕೂಲಿ ಕಾರ್ಮಿಕರು ಕೂಲಿ ಕೆಲಸ ಸಿಗದೆ ಪರದಾಡುತ್ತಿದ್ದು, ದಿಢೀರ್  ಮಳೆಗೆ ಜನರ ಬದುಕು ನೀರಿನಲ್ಲಿ ಕೊಚ್ಚಿಹೋದಂತಾಗಿದೆ. ಇಷ್ಟಾದರೂ ಸಂಬಂಧಪಟ್ಟ ತಾಲ್ಲೂಕು ಆಡಳಿತ, ತಾಲ್ಲೂಕು ಮಟ್ಟದ ಅಧಿಕಾರಿಗಳು ಮಾತ್ರ ಜನರ ಕಷ್ಟ ಕೇಳದೇ ಮೌನಕ್ಕೆ ಶರಣಾಗಿರುವುದು ಎದ್ದು ಕಾಣುತ್ತಿದೆ.

See also  ನವದೆಹಲಿ: ಪಿಎಂಒ ನಿರ್ದೇಶನದಂತೆ ದೆಹಲಿ ಸರ್ಕಾರದ ಕಾರ್ಯಕ್ರಮವನ್ನು ಹೈಜಾಕ್ ಮಾಡಲಾಗಿದೆ ಎಂದ ಎಎಪಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು