ಮಡಿಕೇರಿ, ಡಿ.30: ವಿದ್ಯಾರ್ಥಿಗಳು ಕಲೆ ಮತ್ತು ಸಂಸ್ಕೃತಿಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಸಂಪಾಜೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕರಾದ ಎಚ್.ಜಿ.ಕುಮಾರ್ ಅವರು ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ‘ಚಿಗುರು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳೊಂದಿಗೆ ಕಲಿಕಾ ಚಟುವಟಿಕೆಗಳನ್ನು ಸಮ್ಮಿಳಿತಗೊಳಿಸಿದಾಗ ಏಕಾಗ್ರತೆ ವೃದ್ಧಿಸುತ್ತದೆ ಎಂದರು.
ಹೊಸ ಶಿಕ್ಷಣ ನೀತಿಯ ಆಶಯವೇ ವಿದ್ಯಾರ್ಥಿಗಳಲ್ಲಿ ಸಮಗ್ರ ಸಾಮಥ್ರ್ಯಗಳನ್ನು ಅಂತರ್ಗತಗೊಳಿಸುವುದು. ನೃತ್ಯ, ಏಕಾಪಾತ್ರಭಿನಯ, ಚಿತ್ರಕಲೆ, ಸಂಗೀತ, ರಂಗೋಲಿ, ನಾಟಕ ಹೀಗೆ ಅನೇಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಹೊಂದುವುದರ ಮೂಲಕ ಉತ್ತಮ ಭವಿಷ್ಯ ರೂಢಿಸಿಕೊಳ್ಳಬಹುದು ಎಂದು ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳಲ್ಲಿ ಅಗಾಧವಾದ ವಿವಿಧ ರೀತಿಯ ಪ್ರತಿಭಾ ಸಾಮಥ್ರ್ಯವಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭಾ ಸಾಮಥ್ರ್ಯವನ್ನು ಹೊರತರಲು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ 7 ರಿಂದ 14 ವರ್ಷದೊಳಗಿನ ಪ್ರತಿಭಾವಂತ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗೆ ಸಹಕಾರಿ ಆಗುವಲ್ಲಿ ‘ಚಿಗುರು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ನುಡಿದರು.
ಕಾಲೇಜಿನ ಪ್ರಾಂಶುಪಾಲರಾದ ವೈ.ಕೆ.ಮಾಲತಿ, ಚೆಂಬು ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ರಮೇಶ್ ನಂಬಿಯಾರ್, ಮುಖ್ಯ ಶಿಕ್ಷಕ ಐತಪ್ಪ, ಸಂಸ್ಥೆಯ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಬೇರೆ ಬೇರೆ ಊರುಗಳಿಂದ ಆಗಮಿಸಿದ ವಿದ್ಯಾರ್ಥಿಗಳ ಸುಗಮ ಸಂಗೀತ, ಜಾನಪದ ಹಾಡುಗಳು, ವಿವಿಧ ಸಂಗೀತ ಪರಿಕರಗಳನ್ನು ನುಡಿಸುವಿಕೆ, ಸಂಪಾಜೆ ಪ್ರೌಢಶಾಲೆಯ ವಿದ್ಯಾರ್ಥಿಗಳ ಜಾನಪದ ನೃತ್ಯಗಳು ಆಕರ್ಷಕವಾಗಿದ್ದವು. ಪ್ರಾಂಶುಪಾಲರಾದ ಮಾಲತಿ ಸ್ವಾಗತಿಸಿದರು. ಸಹ ಶಿಕ್ಷಕರಾದ ಅಪ್ಪುಕುಂಞ ಅವರು ವಂದಿಸಿದರು.