ಮಂಡ್ಯ: ಮಂಡ್ಯದ ರೈತರು ಭತ್ತ ಕಬ್ಬು ಬೆಳೆದು ಶ್ರೀಮಂತರಾಗಿರೋದು ಬಹಳ ಕಡಿಮೆ. ಆದ್ದರಿಂದ ಶ್ರೀಗಂಧ ಬೆಳೆ ಬೆಳೆದು ಶ್ರೀಮಂತರಾಗಿ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಅಮರನಾರಾಯಣ್ ರೈತರಿಗೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳಗಾರರ ಸಂಘ, ಬೆಂಗಳೂರು ಮತ್ತು OISCA ಇಂಟರ್ ನ್ಯಾಷನಲ್ ಕರ್ನಾಟಕ ವಲಯ ಇವರ ಸಂಯುಕ್ತಾಶ್ರಯದಲ್ಲಿ 2022-23 ನೇ ಸಾಲಿನ ಆತ್ಮ ಯೋಜನೆಯಡಿ ಶ್ರೀಗಂಧ, ವನಕೃಷಿ ಮತ್ತು ಸಮಗ್ರ ಕೃಷಿ ಪದ್ದತಿ ಕುರಿತು ತರಬೇತಿ ಹಾಗೂ ವಿಚಾರ ಸಂಕೀರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಡ್ಯದಲ್ಲಿ 51 ಭಾಗ ನೀರಾವರಿ ಜಮೀನು ಇದೆ. 42 ಸಾವಿರ ಹೆಕ್ಟೇರ್ ಖುಷ್ಕಿ ಭೂಮಿ ಇದೆ. ರೈತರು ನೀರಾವರಿ ಇಲ್ಲದ ಕೃಷಿ ಭೂಮಿಯಲ್ಲಿ ಶ್ರೀಗಂಧ ಬೆಳೆ ಬೆಳೆದು ಆರ್ಥಿಕವಾಗಿ ಲಾಭ ಪಡೆದುಕೊಳ್ಳಬಹುದು. ಅಂದಿನ ಮೈಸೂರಿನ ಮಹಾರಾಜರು ಹೆಚ್ಚಾಗಿ ಸಿಗುತ್ತಿದ್ದ ಶ್ರೀಗಂಧ ಬೆಳೆಯನ್ನು ಕಂಡು ಮೈಸೂರು ಸ್ಯಾಂಡಲ್ ಸೋಪ್, ಗಂಧದ ಎಣ್ಣೆ ಕಾರ್ಖಾನೆಗೆ ಬುನಾದಿ ಹಾಕಿದರು. ಅದರ ಪರಿಣಾಮ ಇಂದು ದೇಶ ವಿದೇಶಗಳಲೆಲ್ಲಾ ಶ್ರೀಗಂಧದ ಬೆಳೆ ಶ್ರೀಮಂತವಾಗಿದೆ. ಇಡೀ ಭಾರತದಲ್ಲೇ ಕರ್ನಾಟಕ ಶೇ.71ರಷ್ಟು ಶ್ರೀಗಂಧ ಪೂರೈಸುತ್ತಿದೆ. ಈ ನಿಟ್ಟಿನಲ್ಲಿ ರೈತರು ಶ್ರೀಗಂಧದ ಬೆಳೆಯ ಬಗ್ಗೆ ತಿಳಿದುಕೊಂಡು ಶ್ರೀಗಂಧ ಬೆಳೆಯಬೇಕಿದೆ.
ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳಗಾರರ ಸಂಘವು ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ ಸಂಚರಿಸಿ ಶ್ರೀಗಂಧ ಬೆಳೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಸರ್ಕಾರ ಶ್ರೀಗಂಧ ಬೆಳೆಯನ್ನು ತೋಟಗಾರಿಕೆ ಬೆಳೆ ಎಂದು ಪರಿಗಣಿಸಿ, ಇದನ್ನು ಪರಿಣಾಮಕಾರಿವಾಗಿ ತೋಟಗಾರಿಕೆ ಇಲಾಖೆಯಿಂದ ಸಾಲ, ಸೌಲಭ್ಯ ಹಾಗೂ ವಿಮೆ ಇನ್ನಿತರ ಸೌಲಭ್ಯ ಸಿಗುವಂತಾಗಬೇಕು. ಶ್ರೀ ಗಂಧದ ಕೃಷಿಯಲ್ಲಿ ಅತಿಥಿ ಸಸ್ಯ ಉಪಯೋಗಿಸುವ ಗೊಬ್ಬರ, ಗಿಡಗಳ ನಡುವೆ ಅಂತರ, ರೋಗ ನಿಗ್ರಹ ಕುರಿತಂತೆ ರೈತರಿಗೆ ಮಾಹಿತಿ ಕೈಪಿಡಿ ಒದಗಿಸಬೇಕು ಎಂದರು.