ಮೈಸೂರು: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವಿಕಲ ಚೇತನ ಮಕ್ಕಳಿಗಾಗಿ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು.
ಮೈಸೂರು ಜಿಲ್ಲಾಡಳಿತ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ವಿಕಲಚೇತನ ಮಕ್ಕಳಿಗೆ ಮಂಗಳವಾರ ಏರ್ಪಡಿಸಿದ್ದ ಕ್ರೀಡಾಕೂಟಕ್ಕೆ ಬಲೂನ್ ಗಳನ್ನು ಹಾರಿ ಬಿಡುವ ಮೂಲಕ ಮೇಯರ್ ಬಿ.ಎಲ್.ಭೈರಪ್ಪ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ವಿಕಲಚೇತನ ಮಕ್ಕಳಿಗೆ ಜಿಲ್ಲಾಡಳಿತ ಕ್ರೀಡಾಕೂಟ ಆಯೋಜಿಸಿರುವುದು ಖುಷಿ ನೀಡಿದೆ. ಇಂಥಹ ಮಕ್ಕಳು ದೇವರಿಗೆ ಸಮಾನ. ಇವರನ್ನು ಶಿಕ್ಷಕಿಯರು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವರ ತಾಳ್ಮೆ ನಿಜಕ್ಕೂ ಶ್ಲಾಘನೀಯ. ಇಂಥಹವರನ್ನು ಗೌರವಿಸಿ, ಪೂಜಿಸಬೇಕು ಎಂದರು. ನಮಗೆ ಸಾಮಾನ್ಯವಾಗಿ ಮಕ್ಕಳನ್ನೇ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂಥಹುದರಲ್ಲಿ ವಿಕಲಚೇತನ ಮಕ್ಕಳನ್ನು ನೋಡಿಕೊಳ್ಳುವುದು ಒಂದು ಅದ್ಭುತವೇ ಸರಿ ಎಂದು ಬಣ್ಣಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪಥ ಸಂಚಲನ ನಡೆಯಿತು. ಓಟ, ಮ್ಯೂಸಿಕಲ್ ಚೇರ್ ಸೇರಿದಂತೆ ಹಲವಾರು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ಸುಮಾರು 40 ತಂಡಗಳು ಭಾಗವಹಿಸಿದ್ದು ಮೈಸೂರಿನ ಕರುಣಾ, ನಿರೀಕ್ಷಾ, ಸಹನಾ ಸೇರಿದಂತೆ ವಿವಿಧ ವಿಕಲಚೇತನ ಶಾಲೆಗಳ ಮಕ್ಕಳು ಪಾಲ್ಗೊಂಡಿದರು.