ಹೊಸದಿಲ್ಲಿ: ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಏಕಕಾಲಕ್ಕೆ ರೈಲ್ವೆ ಬಜೆಟ್ ಒಳಗೊಂಡ ಸಾಮಾನ್ಯ ಬಜೆಟ್ ಬುಧವಾರ ಬೆಳಿಗ್ಗೆ ಆರಂಭವಾಗಿದ್ದು, ಲೋಕಸಭೆಯಲ್ಲಿ 2017-18ನೇ ಸಾಲಿನ ಬಜೆಟ್ ಮಂಡನೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಆರಂಭಿಸಿದ್ದಾರೆ.
ಮೊದಲಿಗೆ ಹಣಕಾಸು ಸಚಿವರು ಇಂದು ಬೆಳಿಗ್ಗೆ ತಮ್ಮ ಅಧಿಕಾರಿಗಳೊಂದಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಿ, ಬಳಿಕ ರಾಷ್ಟ್ರಪತಿ ಭವನದಿಂದ ಸಂಸತ್ ಗೆ ಆಗಮಿಸಿದರು. ಮಂಗಳವಾರ ತಡರಾತ್ರಿ ಕೇಂದ್ರದ ಮಾಜಿ ಸಚಿವ ಇ. ಅಹಮದ್ ಅವರು ವಿಧಿವಶರಾಗಿದ್ದರು. ಈ ಹಿನ್ನಲೆಯಲ್ಲಿ ಬಜೆಟ್ ಮುಂದೂಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಿರಿಯ ಸಚಿವರೊಂದಿಗೆ ಸಭೆಯನ್ನು ನಡೆಸಿ ಬಜೆಟ್ ಮಂಡಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು.
ವಿಪಕ್ಷಗಳ ಗದ್ದಲದ ನಡುವೆಯೇ ಬಜೆಟ್ ಮಂಡನೆ ಆರಂಭಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಸ್ಪೀಕರ್ ಸುಮಿತ್ರಾ ಮಹಾಜನ್ ಬಜೆಟ್ ಮುಂದೂಡಬೇಕೆಂಬ ಮನವಿಯನ್ನು ತಿರಸ್ಕರಿಸಿದ್ದಾರೆ.
ಬಜೆಟ್ ಮುಖ್ಯಾಂಶಗಳು ಈ ಕೆಳಗಿನಂತಿವೆ:
*4ನೇ ಕೇಂದ್ರ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವ ಜೇಟ್ಲಿ. ನಮ್ಮ ಅವಧಿಯಲ್ಲಿ ಎರಡಂಕೆಯ ಹಣದುಬ್ಬರ ನಿಯಂತ್ರಣ. ಸಾರ್ವಜನಿಕ ಹಣವನ್ನು ಸದುಪಯೋಗಪಡಿಸಲು ಕ್ರಮ.
*ನೋಟು ನಿಷೇಧದ ನಂತರ ಮೊದಲ ಬಾರಿಗೆ ಬಜೆಟ್ ಮಂಡನೆ. ಕಳೆದ ವರ್ಷ ಜಿಡಿಪಿ ದರದಲ್ಲಿ ವೃದ್ಧಿ. ಉದ್ಯೋಗ ಕ್ಷೇತ್ರದಲ್ಲಿ ಬಲವರ್ಧನೆ ನಮ್ಮ ಗುರಿ. ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ.
*ಬಜೆಟ್ ಅನ್ನು ಬಡವರಿಗೆ ತಲುಪಿಸುವುದೇ ನಮ್ಮ ಗುರಿ. ನಮ್ಮ ಅವಧಿಯಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬಂದಿದೆ. ದೇಶದಲ್ಲಿ ಕಪ್ಪು ಹಣ ನಿಯಂತ್ರಿಸಿದ್ದೇವೆ. ಈ ವರ್ಷ ಎಲ್ಲಾ ಆರ್ಥಿಕ ವಲಯ ಚೇತರಿಕೆ ಕಾಣಲಿದೆ.
*ವಸಂತ ಪಂಚಮಿ ದಿನ ಬಜೆಟ್ ಮಂಡನೆ ಆರಂಭಿಸಿದ್ದೇನೆ. ದೇಶದ ಅರ್ಥವ್ಯವಸ್ಥೆಯ ಮೇಲೆ ಅಮೆರಿಕ ಚುನಾವಣೆಯ ಪ್ರಭಾವವೂ ಇದೆ. ಜಗತ್ತಿನ ಆರ್ಥಿಕ ಪ್ರಗತಿ ದೇಶದ ಅಭಿವೃದ್ಧಿ ಅವಲಂಬಿತವಾಗಿದೆ.
*ಜಗತ್ತಿನ 6ನೇ ಅತಿ ದೊಡ್ಡ ಆರ್ಥಿಕ ಶಕ್ತಿ ಹೊಂದಿದ ದೇಶ ಭಾರತವಾಗಿದೆ. ವಿದೇಶಿ ಬಂಡವಾಳದ ಹೂಡಿಕೆ ಶೇ.36ರಷ್ಟು ಹೆಚ್ಚಳವಾಗಿದೆ. ದೇಶದ ವಿದೇಶಿ ವಿನಿಮಯ ಹೆಚ್ಚಳವಾಗಿದೆ.
*ನೋಟು ನಿಷೇಧದ ನಂತರ ದೇಶದಲ್ಲಿ ಆರ್ಥಿಕ ಕ್ರಾಂತಿಯಾಗಿದೆ. ನೋಟು ನಿಷೇಧ ದೇಶದ ಅರ್ಥವ್ಯವಸ್ಥೆಗೆ ಭವಿಷ್ಯದಲ್ಲಿ ಲಾಭದಾಯಕವಾಗಲಿದೆ.
*ಬಡರಿಗೆ ವಸತಿ ಸೌಲಭ್ಯಕ್ಕೆ ಕ್ರಮ, 2017ರ ಜಿಡಿಪಿ ದರ ಶೇ.7.2ರಷ್ಟು. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಬಂಡವಾಳ. ಮೂಲಭೂತ ಸೌಕರ್ಯಕ್ಕೆ, ಬಡತನ ನಿರ್ಮೂಲನೆಗೆ ಹೆಚ್ಚಿನ ಒತ್ತು.
*ಎಫ್ ಡಿಎ ನೀತಿಗಳಲ್ಲಿ ಮಹತ್ವದ ಬದಲಾವಣೆ. ಆರ್ಥಿಕ ಸುಧಾರಣೆಗೆ ಜಿಎಸ್ ಟಿ ಜಾರಿ. ಟೆಕ್ ಇಂಡಿಯಾಕ್ಕೆ ಒತ್ತು. ಮೂರು ಪ್ರಮುಖ ಸುಧಾರಣೆಗಳ ಘೋಷಣೆ.
*ಅಮಾನ್ಯೀಕರಣದ ಲಾಭ ದೇಶದಲ್ಲಿ ಈಗಾಗಲೇ ಕಾಣುತ್ತಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಹೆಚ್ಚಿನ ಬಂಡವಾಳ ಹೂಡಿಕೆ. ಉತ್ತಮ ಉದ್ದೇಶ ಎಂದಿಗೂ ಸಹ ವೈಫಲ್ಯ ಆಗುವುದಿಲ್ಲ.
*ಜಿಎಸ್ ಟಿ ಕೌನ್ಸಿಲ್ ಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಸಲಾಗಿದೆ. ನೋಟು ನಿಷೇಧ ಕೇಂದ್ರ ಸರ್ಕಾರದ ಸಾಧನೆ ಎಂದು ಬಣ್ಣನೆ. ನೋಟು ನಿಷೇಧದ ನಿರ್ಧಾರದಿಂದ ಬ್ಯಾಂಕ್ ಗಳಲ್ಲಿ ಸಾಲ ಕಡಿಮೆಯಾಗಿದೆ.
*ನೋಟು ನಿಷೇಧದ ಲಾಭ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಸಿಗಲಿದೆ. ಆರ್ಥಿಕ ಸ್ಥಿತಿ ಅಭಿವೃದ್ಧಿಗೆ ನೋಟು ನಿಷೇಧ ಪೂರಕ. ಬೆಳವಣಿಗೆ ಹಾಗೂ ಅಭಿವೃದ್ಧಿ ಹಾದಿಯಲ್ಲಿ ಕೇಂದ್ರ ಸರ್ಕಾರವಿದೆ.
*ಮಹಾತ್ಮಗಾಂಧಿ ಹೇಳಿಕೆ ಉಲ್ಲೇಖಿಸಿದ ಅರುಣ್ ಜೇಟ್ಲಿ. ಕೃಷಿ ಕ್ಷೇತ್ರದ ಅತ್ಯುತ್ತಮ ಪ್ರಗತಿಯಲ್ಲಿ ಭಾರತವಿದೆ. ಆರ್ಥಿಕವಾಗಿ ಅತೀ ವೇಗದಲ್ಲಿ ಭಾರತ ಬೆಳೆಯುತ್ತಿದೆ. ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಕೇಂದ್ರದ ನೆರವು.
*ರೈತರು ಉತ್ತಮ ಬೆಳೆಯನ್ನು ಬೆಳೆಯಲು ಸರಿಯಾದ ಸಮಯದಲ್ಲಿ ಸಾಲ ಸೌಲಭ್ಯ ಲಭ್ಯವಾಗಬೇಕು. ಹಿಂದುಳಿದ ಭಾಗದ ರೈತರಿಗೆ ಸಾಲಸೌಲಭ್ಯ ಸಿಗುವಂತೆ ನಮ್ಮ ಗಮನವನ್ನು ಹರಿಸಿದ್ದೇವೆ. ಇದರಲ್ಲಿ ಈಶಾನ್ಯ ಭಾರತದ ಭಾಗಗಳೂ ಸೇರಿವೆ.
*ಭಾರತದ ಮುಂದಿನ ಗುರಿ ಟೆಕ್ ಇಂಡಿಯಾ ಯೋಜನೆ. ಫಲಸ್ ಭೀಮಾ ಯೋಜನೆಯೂ ಸಹ ರೈತರಿಗೆ ನೆರವು. ಬೆಳೆ ವಿಮೆ ಯೋಜನೆಗೆ 9 ಸಾವಿರ ಕೋಟಿ ರೂ.
*ಜಿಡಿಪಿ ದರದಲ್ಲಿ ಹೆಚ್ಚಳವಾಗುತ್ತದೆ, ಪ್ರಗತಿ ಸಾಧ್ಯವಾಗಲಿದೆ. ದಾಸ್ಯದ ದಿನಗಳ ಸಂಪ್ರದಾಯವನ್ನು ಕೈಬಿಡಲಾಗಿದೆ. ಜಿಎಸ್ ಟಿ ಜಾರಿ ಬಳಿಕ ದೇಶದ ಪ್ರಗತಿ ವೇಗವಾಗಿ ಬೆಳೆಯಲಿದೆ. ಭಾರತದ ಮುಂದಿನ ಗುರಿ ಟಿಎಫ್ ಸಿ ಇಂಡಿಯಾ ಯೋಜನೆ
*ರೈತರಿಗೆ 10 ಲಕ್ಷ ಕೋಟಿ ರೂಪಾಯಿ ಸಾಲ ಸೌಲಭ್ಯದ ಗುರಿ. ಡಿಸೆಂಬರ್ 31ಕ್ಕೆ ಪ್ರಧಾನಿ ಮೋದಿ ಅವರಿಂದ ಹಲವು ಯೋಜನೆಗಳ ಘೋಷಣೆಯಾಗಿದೆ.
*ಯುವಶಕ್ತಿ ಬಲವರ್ಧನೆ, ಮೂಲಭೂತ ವ್ಯವಸ್ಥೆಗೆ ಆದ್ಯತೆ.ಬಡವರ ಅಭ್ಯುದಯ, ಹಳ್ಳಿಗಳ ಅಭಿವೃದ್ಧಿ ಕೇಂದ್ರದ ಗುರಿ. ಹೈನುಗಾರಿಕೆ ಅಭಿವೃದ್ಧಿಗೆ 8 ಸಾವಿರ ಕೋಟಿ. ಗ್ರಾಮೀಣ ಪ್ರದೇಶಗಳ 1 ಕೋಟಿ ಕುಟುಂಬಗಳ ಬಡತನ ನಿರ್ಮೂಲನೆ.
*1 ಕೋಟಿ ಮನೆಗಳ ನಿರ್ಮಾಣದ ಗುರಿ. 50 ಸಾವಿರ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಮನ್ನಣೆ. 28 ಸಾವಿರ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ. ಡಿಜಿಟಲ್ ಇಂಡಿಯಾಗೆ ಒತ್ತು.
*ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಒತ್ತು. ಹಾಲು ಉತ್ಪಾದನೆ ನಿಧಿಯಲ್ಲಿ ಹೆಚ್ಚಳ. 2018ರೊಳಗೆ ಗ್ರಾಮೀಣ ಪ್ರದೇಶದಲ್ಲಿ ಶೇ.100ರಷ್ಟು ವಿದ್ಯುತ್ ಪೂರೈಕೆ.
*2019ರ ಅಂತ್ಯಕ್ಕೆ ಗ್ರಾಮಗಳಲ್ಲಿ 1 ಕೋಟಿ ಮನೆಗಳ ನಿರ್ಮಾಣದ ಗುರಿ. ಪ್ರಧಾನಮಂತ್ರಿ ಅವಾಜ್ ಯೋಜನೆಗೆ 28 ಸಾವಿರ ಕೋಟಿ ರೂಪಾಯಿ. ಗ್ರಾಮಗಳ ಅಭಿವೃದ್ಧಿಗೆ 3 ಲಕ್ಷ ಕೋಟಿ ರೂಪಾಯಿ.
*ನರೇಗಾ ಯೋಜನೆಗೆ 48 ಸಾವಿರ ಕೋಟಿ ರೂಪಾಯಿ ಅನುದಾನ. ಗ್ರಾಮೀಣ ಪ್ರದೇಶದ ಸ್ಥಳೀಯ ಸಂಶೋಧನಾ ಪ್ರತಿಭೆಗಳಿಗೆ ಅವಕಾಶ. ಆನ್ ಲೈನ್ ಶಿಕ್ಷಣಕ್ಕೆ ಒತ್ತು. 350 ಹೊಸ ಕೋರ್ಸ್.
*2018ರ ವೇಳೆಗೆ ಹಳ್ಳಿ, ಹಳ್ಳಿಗೂ ವಿದ್ಯುತ್ ಯೋಜನೆ ಗುರಿ. ನೀರಾವರಿ ಯೋಜನೆಗೆ 20 ಸಾವಿರ ಕೋಟಿ ರೂಪಾಯಿ. ಗ್ರಾಮೀಣ ರಸ್ತೆ ಅಭಿವೃದ್ಧಿಗೆ 27 ಸಾವಿರ ಕೋಟಿ ರೂಪಾಯಿ ವಿನಿಯೋಗ.
*ಮಣ್ಣಿನ ಗುಣಮಟ್ಟ ಪರೀಕ್ಷಾ ಕೇಂದ್ರಗಳ ಸ್ಥಾಪನೆ. 1.87 ಲಕ್ಷ ಕೋಟಿ ಗ್ರಾಮೀಣದ ಅಭಿವೃದ್ಧಿಗೆ ಬಳಕೆ. ರಾಷ್ಟ್ರೀಯ ಗುಣಮಟ್ಟ ಅಕಾಡೆಮಿ ಸ್ಥಾಪನೆ ಯೋಜನೆ.
* 1 ಕೋಟಿ ಕುಟುಂಬಗಳಿಗೆ ಅಂತ್ಯೋದಯ ಯೋಜನೆ. ಗರ್ಭಿಣಿಯರಿಗೆ 6 ಸಾವಿರ ರೂಪಾಯಿ ಸಹಾಯಧನ. ನೇರವಾಗಿ ಗರ್ಭಿಣಿಯರ ಖಾತೆಗೆ ಹಣ. 14 ಲಕ್ಷ ಅಂಗನವಾಡಿಗಳ ಸ್ಥಾಪನೆ. ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ.
* ಸಿಬಿಎಸ್ ಸಿ ಪ್ರವೇಶ ಪರೀಕ್ಷೆ ಇಲ್ಲ. ಹನಿ ನೀರಾವರಿಗೆ 500 ಕೋಟಿ ರೂಪಾಯಿ. ಜಾರ್ಖಂಡ್, ಗುಜರಾತ್ ನಲ್ಲಿ ಏಮ್ಸ್ ಸ್ಥಾಪನೆ. 2025ರೊಳಗೆ ಕ್ಷಯರೋಗ ನಿರ್ಮೂಲನೆಗೆ ಗುರಿ.
* ದೇಶದಲ್ಲಿ ಒಂದೂವರೆ ಲಕ್ಷ ಉಪ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ ಏರಿಕೆ. ದೇಶದ 5 ಕಡೆ ಪ್ರವಾಸೋದ್ಯಮ ವಲಯ ಸ್ಥಾಪನೆ. ಆಧಾರ್ ಕಾರ್ಡ್ ಆಧಾರಿತ ಆರೋಗ್ಯ ಕಾರ್ಡ್ ಯೋಜನೆ.
* ಹಿರಿಯ ನಾಗರಿಕರಿಗೆ ಪಿಂಚಣಿ, ವಿದ್ಯುತ್ ಯೋಜನೆಗೆ 4500 ಕೋಟಿ ರೂಪಾಯಿ. ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ.ಶಾಲೆಗಳಲ್ಲಿ ಕಲಿಕೆಗೆ ಹೊಸ ಸುಧಾರಿತ ವ್ಯವಸ್ಥೆ. ಗ್ರಾಮೀಣ ಶಿಕ್ಷಣಕ್ಕಾಗಿ ತಂತ್ರಜ್ಞಾನದ ಅಳವಡಿಕೆ.
* ಹೆಚ್ಚು ಕಾಲೇಜುಗಳಿಗೆ ಸ್ವಾಯತ್ತೆ ನೀಡಲು ನಿರ್ಧಾರ. ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ 10 ಗುರಿ. ರೈತರ ಪ್ರಗತಿ, ಯುವಶಕ್ತಿ ಬಲವರ್ಧನೆ, ಡಿಜಿಟಲ್ ಇಂಡಿಯಾ, ಸಾರ್ವಜನಿಕ ಸೇವೆ, ದುಂದುವೆಚ್ಚಕ್ಕೆ ಕಡಿವಾಣ ಸೇರಿ 10 ಅಂಶಗಳತ್ತ ಚಿತ್ತ.
* ಪರಿಶಿಷ್ಟ ಜಾತಿಗೆ 53ಸಾವಿರ ಕೋಟಿ ಅನುದಾನ. ಕೌಶಲಾಭಿವೃದ್ಧಿಗಾಗಿ 100 ಕೇಂದ್ರಗಳ ಸ್ಥಾಪನೆಗೆ ನಿರ್ಧಾರ. ಕೃಷಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ನಿರ್ಧಾರ. ದೇಶದ ಪ್ರತಿ ಹಳ್ಳಿಯಲ್ಲಿಯೂ ಶೌಚಾಲಯ ನಿರ್ಮಾಣ.
* ರೈಲ್ವೆ ಸುರಕ್ಷತೆಗೆ 1 ಲಕ್ಷ ಕೋಟಿ, ಈ ಸಾಲಿನಲ್ಲಿ ಹೆಚ್ಚುವರಿ 5000 ಪಿಜಿ ಸೀಟ್ಸ್. 600 ಜಿಲ್ಲೆಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ. ಹಿರಿಯ ನಾಗರಿಕರಿಗೆ ಆರೋಗ್ಯ ಕಾರ್ಡ್ ಗಳ ವಿತರಣೆ.
* ರೈಲ್ವೆ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಿದರೆ ಸರ್ವಿಸ್ ಚಾರ್ಜ್ ಇಲ್ಲ. 3500 ಕಿಮೀ ಹೊಸ ರೈಲ್ವೆ ಹಳಿಗಳಿಗೆ ಯೋಜನೆ. ಬಂಡವಾಳ ಹೂಡಿಕೆ ಸುರಕ್ಷತೆಗೆ ಒತ್ತು.
* ಇ ಟಿಕೆಟ್ ಮೇಲೆ ಸರ್ವಿಸ್ ಚಾರ್ಜ್ ಇರುವುದಿಲ್ಲ. 2020ರೊಳಗೆ ಮಾನವ ರಹಿತ ರೈಲ್ವೆ ಕ್ರಾಸಿಂಗ್. 4 ಪ್ರಮುಖ ಉದ್ದೇಶಗಳೊಂದಿಗೆ ರೈಲ್ವೆ ಅಭಿವೃದ್ಧಿ. ಆನ್ ಲೈನ್ ರೈಲು ಟಿಕೆಂಟ್ ಬುಕ್ಕಿಂಗ್ ಗೆ ಸೇವಾದರ ಇಲ್ಲ.
* ರೈಲ್ವೆ ಸುರಕ್ಷಾ ಯೋಜನೆಗೆ 1 ಲಕ್ಷ ಕೋಟಿ ರೂಪಾಯಿ, ದೇಶದಲ್ಲಿ 70 ರೈಲ್ವೆ ಯೋಜನೆಗಳಿಗೆ ಅಸ್ತು.
* ತೀರ್ಥಯಾತ್ರೆಗೆ ವಿಶೇಷ ರೈಲುಗಳ ಆಯೋಜನೆ.ರೈಲ್ವೆ ಮಾರ್ಗ ಅಭಿವೃದ್ಧಿಗೆ 1.31ಲಕ್ಷ ಕೋಟಿ ರೂಪಾಯಿ ಅನುದಾನ. 25 ರೈಲ್ವೆ ನಿಲ್ದಾಣ ನವೀಕರಣ ಮತ್ತು ಅಭಿವೃದ್ಧಿ. ದೂರು ನೀಡಿದರೆ, ತಕ್ಷಣ ರೈಲ್ವೆ ಬೋಗಿಗಳ ಶುಚಿತ್ವಕ್ಕೆ ಅವಕಾಶ.
*ಟೆಕ್ಸ್ ಟೈಲ್ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಯೋಜನೆ. ಎಲ್ಲಾ ಪರೀಕ್ಷೆಗಳಿಗೆ ಒಂದೇ ಒಂದು ಪ್ರಾಧಿಕಾರ. ದೇಶದಲ್ಲಿ 2 ಹೊಸ ತೈಲಾಗಾರ ಸ್ಥಾಪನೆ ಯೋಜನೆ. ಹಣಕಾಸು ವಲಯದಲ್ಲಿ ಸೈಬರ್ ಸೆಕ್ಯುರಿಟಿಗೆ ಒತ್ತು.
*ಕರಾವಳಿ ಹೈವೇಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು. ಸಾರಿಗೆ ಕ್ಷೇತ್ರಕ್ಕೆ 2.41 ಲಕ್ಷ ಕೋಟಿ ರೂಪಾಯಿ ಅನುದಾನ. ಆಲ್ ಲೈನ್ ನಲ್ಲಿ ಎಫ್ ಡಿಐ ಪ್ರಸ್ತಾವನೆ. 1ಕೋಟಿ 50 ಲಕ್ಷ ಹಳ್ಳಿಗಳಿಗೆ ಬ್ರಾಡ್ ಬ್ಯಾಂಡ್ ಯೋಜನೆ.
*ಭಾರತವನ್ನು “ಎಲೆಕ್ಟ್ರಾನಿಕ್ ಹಬ್’ ಮಾಡಲಾಗುವುದು.ಸಣ್ಣ ನಗರಗಳಲ್ಲೂ ವಿಮಾನ ನಿಲ್ದಾಣಗಳ ನಿರ್ಮಾಣ.
ಎಲ್ಲಾ ರಾಷ್ಟ್ರೀಯ ಬ್ಯಾಂಕ್ ಗಳಿಗೆ 10 ಸಾವಿರ ಕೋಟಿ ಅನುದಾನ. ಪೇಮೆಂಟ್ ನಿಯಂತ್ರಣ ಮಂಡಳಿ ಸ್ಥಾಪನೆ. ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಡಿಜಿಟಲ್ ಪಾವತಿ ಕಡ್ಡಾಯ.
*ಅಕ್ರಮ ಚಿಟ್ ಫಂಡ್ ಗಳಿಗೆ ಕಡಿವಾಣ ಹಾಕಲು ದಿಟ್ಟ ಕ್ರಮ. 25 ಲಕ್ಷ ಕೋಟಿ ಜನರಿಂದ ಭೀಮ್ ಆಪ್ ಬಳಕೆ. ಮುದ್ರಾ ಯೋಜನೆಯಡಿ ಸಾಲ ವಿತರಣೆ. ಭೀಮ್ ಆಪ್ ಬಳಕೆದಾರರಿಗೆ 2 ಹೊಸ ಯೋಜನೆ. ಬ್ಯಾಂಕಿಂಗ್ ವಲಯದಲ್ಲಿ ಡಿಜಿಟಲ್ ಕ್ರಾಂತಿ.
*2,74,414 ಕೋಟಿ ರೂಪಾಯಿ ರಕ್ಷಣಾ ಯೋಜನೆಗೆ ಅನುದಾನ. ವಿಜ್ಞಾನ ಕ್ಷೇತ್ರಕ್ಕೆ 37,435 ಕೋಟಿ ರೂ ಅನುದಾನ.
*ಎಲ್ಲಾ ಜಿಲ್ಲಾ ಅಂಚೆ ಕಚೇರಿಗಳಲ್ಲಿ ಪಾಸ್ಪೋರ್ಟ್ ಸೇವೆ ಲಭ್ಯ
*ಹೊಸ ಕಾನೂನುಗಳ ಮೂಲಕ ಆಸ್ತಿ ಜಪ್ತಿ,ಸಾಲ ಪಾವತಿಸದೆ ತಪ್ಪಿಸಿಕೊಂಡವರ ವಿರುದ್ಧ ಕಠಿಣ ಕ್ರಮ.
*9 ಲಕ್ಷ ಜನರಿಂದ ಮಾತ್ರ ತೆರಿಗೆ ಪಾವತಿ. 24 ಲಕ್ಷ ಜನರು 10 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. 50 ಲಕ್ಷಕ್ಕಿಂತ ಮೀರಿದ ಆದಾಯ ಹೊಂದಿರುವುದಾಗಿ ಘೋಷಿಸಿಕೊಂಡವರು 1.72 ಲಕ್ಷ ಜನರು . 2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವುದಾಗಿ ಘೋಷಿಸಿಕೊಂಡವರು 99 ಲಕ್ಷ ಜನ.
*ಶೇಕಡಾ 5.97 ಕಂಪೆನಿಗಳಿಂದ ಮಾತ್ರವೇ ತೆರಿಗೆ ಪಾವತಿಯಾಗುತ್ತಿದೆ. ವಾರ್ಷಿಕ 50 ಕೋಟಿ ರೂ ವ್ಯವಹಾರ ಇರುವ ಕಂಪೆನಿಗಳಿಗೆ ಶೇ.5 ರಷ್ಟು ತೆರಿಗೆ
*ಈ ಬಾರಿ ಆದಾಯ ತೆರಿಗೆಯ ಮಿತಿಯಲ್ಲಿ ಯಾವುದೇ ಏರಿಕೆ ಮಾಡಿಲ್ಲ. 2.5 ಲಕ್ಷಕ್ಕಿಂತ ಹೆಚ್ಚು 5 ಲಕ್ಷದ ವರೆಗೆ ಶೇಕಡಾ 10 ರಷ್ಟಿದ್ದ ತೆರಿಗೆ ಶೇಕಡಾ 5 ಕ್ಕೆ ಇಳಿಕೆ .
*3ಲಕ್ಷಕ್ಕಿಂತ ಹೆಚ್ಚು ನಗದು ವಹಿವಾಟಿಗೆ ಅವಕಾಶ ಇಲ್ಲ. ರಾಜಕೀಯ ಪಕ್ಷಗಳಿಗೆ 2 ಸಾವಿರ ರೂಪಾಯಿಗಿಂತ ಹೆಚ್ಚು ದೇಣಿಗೆ ಕೊಟ್ಟವರ ಮಾಹಿತಿ ಕಡ್ಡಾಯ.