ತಿರುವನಂತಪುರಂ: ಎಲ್ಡಿಎಫ್ ಆರ್ಯ ರಾಜೇಂದ್ರನ್ ಅವರು ತಿರುವುನಂತಪುರಂ ಕಾರ್ಪೋರೇಷನ್ನ ಮೇಯರ್ ಆಗುವ ಮೂಲಕ ಭಾರತದ ಅತೀ ಕಿರಿಯ ಮೇಯರ್ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ.
ಅವರು ಇತ್ತೀಚೆಗೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವುಕಂಡಿದ್ದು, 21 ವರ್ಷ ಪ್ರಾಯದ ಆರ್ಯ ರಾಜೇಂದ್ರನ್ ಅವರು ಮುದುವನ್ಮುಗಲ್ ಕ್ಷೇತ್ರದ ವಾರ್ಡ್ ಕೌನ್ಸಿಲರ್ ಆಗಿ ನೇಮಕ ಗೊಂಡಿದ್ದಾರೆ. ಆರ್ಯ ಆಲ್ ಸೇಂಟ್ಸ್ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿನಿಯಾಗಿರುವ ಆರ್ಯ ರಾಜೇಂದ್ರನ್ ಎಸ್ಎಫ್ಐ ರಾಜ್ಯ ಸಮಿತಿಯ ಸದಸ್ಯರಾಗಿದ್ದಾರೆ. ಅಲ್ಲದೇ ಬಾಲಜನಸಂಗಂ ಘಟಕದ ರಾಜ್ಯಾಧ್ಯಕ್ಷರಾಗಿದ್ದಾರೆ.
ಇದೀಗ ತಮ್ಮ ಮೊದಲ ಗೆಲುವಿನಲ್ಲೇ ಮೇಯರ್ ಆಗುವ ಅವಕಾಶ ಆರ್ಯ ಅವರಿಗೆ ಲಭಿಸಿತು. ಆರ್ಯ ರಾಜೇಂದ್ರನ್ ಅವರನ್ನು ಮೇಯರ್ ಆಗಿ ಆಯ್ಕೆ ಮಾಡುವುದಾಗಿ ಸಿಪಿಎಂ ಜಿಲ್ಲಾ ಕಾರ್ಯಾಲಯ ತಿಳಿಸಿದೆ. ಚುನಾವಣೆ ಸಮಯದಲ್ಲಿ ಜಮೀಲಾ ಶ್ರೀಧರ್ ಅವರನ್ನು ಮೇಯರ್ ಪದವಿಗೆ ಸೂಚಿಸಲಾಗಿತ್ತು. ಆದರೆ ಇದೀಗ ಮೇಯರ್ ಪಟ್ಟ 21 ವರ್ಷದ ಆರ್ಯ ರಾಜೇಂದ್ರನ್ ಅವರಿಗೆ ಒಲಿದಿದೆ.
ಈ ಆಯ್ಕೆಯಲ್ಲಿಯೂ ಇರುವ ವಿಶೇಷತೆ ಎಂದರೆ, ಆರ್ಯ ರಾಜೇಂದ್ರನ್ ಅವರನ್ನು ಮೇಯರ್ ಆಗಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಈ ಮೂಲಕ ದೇಶದ ಕಿರಿಯ ಮೇಯರ್ ಎಂಬ ಗರಿಮೆ ಆರ್ಯ ಅವರಿಗೆ ಸಂದಿದೆ.