ನವದೆಹಲಿ: ರಾಷ್ಟ್ರದ ಹಲವೆಡೆ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಮಧ್ಯಪ್ರದೇಶ, ಜಾರ್ಖಂಡ್, ಪಂಜಾಬ್, ಛತ್ತಿಸ್ಗಡ್, ಗುಜರಾತ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಈ ಹಕ್ಕಿಜ್ವರದ ಕಾರಣದಿಂದಾಗಿ ಹಿಮಾಚಲ ಪ್ರದೇಶದ ಕಾಂಗೋ ಜಿಲ್ಲೆಯ ಪಾಂಗ್ ಡ್ಯಾಮ್ ನದಿಯ ಬಳಿ ಸುಮಾರು 2300 ಕ್ಕೂ ಹೆಚ್ಚು ವಲಸೆ ಹಕ್ಕಿಗಳು ಮೃತಪಟ್ಟಿದೆ. ಆದ್ದರಿಂದ ಮುಂಜಾಗೃತಾ ಕ್ರಮವಾಗಿ ಈ ಪ್ರದೇಶದಲ್ಲಿ ನಡೆಯುತ್ತಿದ್ದ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಅದರೊಂದಿಗೆ ಹಿಮಾಚಲ ಪ್ರದೇಶದ ಹಲವು ಪ್ರದೇಶಗಳಲ್ಲಿ ಕೋಳಿಮಾಂಸ ಮಾರಾಟವನ್ನು ಕೂಡ ನಿಷೇಧಿಸಲಾಗಿದ್ದು, ಮಾಂಸದ ರಫ್ತಿನ ಮೇಲೆಯೂ ಕಟ್ಟುನಿಟ್ಟಾದ ನಿಗಾವಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಕರ್ನಾಟಕದ ಯಾವುದೇ ಪ್ರದೇಶಗಳಲ್ಲಿ ಇದುವರೆಗೂ ಹಕ್ಕಿಜ್ವರದ ಪ್ರಕರಣಗಳು ದಾಖಲಾಗದೇ ಇರುವುದು ಸಮಾಧಾನಕರ ವಿಷಯವಾಗಿದೆ.
ಹಕ್ಕಿಜ್ವರದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾಗಿ ಆಚರಿಸಬೇಕಾದ ನಿಯಮಗಳ ಕುರಿತು ಶ್ರೀಘ್ರದಲ್ಲೇ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.